ತಮಿಳಿನಿಂದಲೇ ಕನ್ನಡಡ ಹುಟ್ಟಿದ್ದು ಅಂತಾ ಹೇಳುವ ಮೂಲಕ ಕನ್ನಡಿಗರ ರೋಷಾವೇಷಕ್ಕೆ ಕಾರಣವಾಗಿದ್ದ ಕಮಲ್ ಹಾಸನ್ ಇಲ್ಲಿಯವರೆಗೂ ಕ್ಷಮೆ ಕೇಳಿಲ್ಲ.
ಹೈಕೋರ್ಟ್ ಸಲಹೆ ನೀಡಿದರೂ ಕಮಲ್ ತಮ್ಮ ಅಹಂಕಾರವನ್ನು ತೊರೆಯಲಿಲ್ಲ. ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್, ಕಮಲ್ ರ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅನುವು ಮಾಡಿಕೊಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.
ಗುಂಪು ಬೆದರಿಕೆಗಳಿಗೆ ಕಾನೂನಿನ ನಿಯಮಗಳನ್ನು ಒತ್ತೆಯಾಗಿ ಇಡಲು ಸಾಧ್ಯವಿಲ್ಲ. ಚಿತ್ರಮಂದಿರಗಳಲ್ಲಿ ಏನು ಪ್ರದರ್ಶಿಸಬೇಕೆಂದು ಉದ್ರಿಕ್ತ ಗುಂಪುಗಳು ನಿರ್ಧರಿಸಲು ಅವಕಾಶ ನೀಡಲಾಗುವುದಿಲ್ಲ ಅಂತಾ ಕೋರ್ಟ್ ಎಚ್ಚರಿಕೆ ನೀಡಿದೆ.
ಕರ್ನಾಟಕದಲ್ಲಿ ಥಗ್ ಲೈಫ್ ರಿಲೀಸ್ ಗೆ ವಿತರಕರು ತಡೆ ವಿಧಿಸಿದ್ದ ಕ್ರಮವನ್ನು ಪ್ರಶ್ನಿಸಿ ಎಂ ಮಹೇಶ್ ಎನ್ನುವವರು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಉಜ್ವಲ್ ಭುಯಾನ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರಿದ್ದ ಪೀಠ ಕರ್ನಾಟಕದಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಸೂಚಿಸಿದೆ.
ಇತ್ತ ಸುಪ್ರೀಂಕೋರ್ಟ್ ಆದೇಶ ಬೆನ್ನಲ್ಲೇ ಪ್ರತಿಕ್ರಿಯಿಸಿರೋ ವಿತರಕರು, ಕೋರ್ಟ್ ತೀರ್ಪು ಏನೇ ಬಂದಿದ್ದರೂ ನಾವು ಕರ್ನಾಟಕದಲ್ಲಿ ಸಿನಿಮಾ ವಿತರಣೆ ಮಾಡೋದಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.