ಬೃಹತ್ ನಗರ ಮುಂಬೈನಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಐವರು ಪ್ರಯಾಣಿಕರು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಅಲ್ಲದೇ, ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಿಕ್ಕಿರಿದು ತುಂಬಿದ್ದ ಪುಷ್ಪಕ್ ಎಕ್ಸ್ ಪ್ರೆಸ್ ರೈಲು, ದಿವ ಮತ್ತು ಕೊಪರ್ ರೈಲ್ವೆ ಸ್ಟೇಷನ್ ಮಧ್ಯೆ ಸಂಚಾರ ನಡೆಸುತ್ತಿತ್ತು. ಪ್ರಯಾಣಿಕರನ್ನು ಹೊತ್ತು ರೈಲು ಕಾಸರಕ್ಕೆ ತೆರಳುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದ್ದು, ಬೋಗಿಯ ಬಾಗಿಲಲ್ಲಿ ನಿಂತು ಜೋತಾಡುತ್ತಿದ್ದ ಪ್ರಯಾಣಿಕರು ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಐವರು ಉಸಿರು ಚೆಲ್ಲಿದ್ದಾರೆ.
ರೈಲ್ವೆ ಸಿಬ್ಬಂದಿ ಮಾಹಿತಿಯಂತೆ, ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ರೈಲು ಏರಿದ್ದರು. ಕೆಲಸಕ್ಕೆ ಹೋಗುವ ಧಾವಂತದಲ್ಲಿ ಪ್ರಯಾಣಿಕರು ರೈಲು ಹತ್ತಿದ್ದು, ಎಲ್ಲಾ ಭೋಗಿಗಳು ತುಂಬಿ ತುಳುಕುತಿದ್ದವು. ಹೀಗಾಗಿ ಬಾಗಿಲಲ್ಲಿ ನಿಂತಿದ್ದವರು ಆಯತಪ್ಪಿ ಬಿದ್ದು ದುರ್ಘಟನೆ ನಡೆದಿದೆ.