ಜೂನ್ 4. ಬೆಂಗಳೂರಿನ ಪಾಲಿಗೆ ಅತ್ಯಂತ ಕರಾಳ ದಿನ. 40 ವರ್ಷಗಳ ಬಳಿಕ ರಾಜಧಾನಿ ಅಂಗಳದಲ್ಲಿ ಘನಘೋರ ಕಾಲ್ತುಳಿತ ಪ್ರಕರಣ ಘಟಿಸಿತ್ತು. 11 ಮಂದಿ ಅಮಾಯಕ ಅಭಿಮಾನಿಗಳು ಜೀವ ತೆತ್ತಿದ್ದರು. ಅದರಲ್ಲೂ ಬಾಳಿ ಬದುಕಬೇಕಿದ್ದ 20 ವರ್ಷದೊಳಗಿನ ಮಕ್ಕಳ ಜೀವವೇ ಟಾರ್ಗೆಟ್ ಆಗಿದ್ದು ನಿಜಕ್ಕೂ ದುರಂತವೇ ಸರಿ. ಆದರೆ, ಅವತ್ತು ನಿಜಕ್ಕೂ ಈ ಮಹಾ ದುರಂತವನ್ನು ತಪ್ಪಿಸಬಹುದಿತ್ತು ಎನ್ನಲಾಗುತ್ತಿದೆ.
ಆ ಒಂದು ದೊಡ್ಡ ತಪ್ಪು ನಡೆಯದೇ ಇದ್ದಿದ್ದರೆ ಇವತ್ತು ಆರ್ ಸಿಬಿ ವಿಜಯೋತ್ಸವ ಇತಿಹಾಸದ ಪುಟದಲ್ಲಿ ಸಂಭ್ರಮಾಚರಣೆಯಾಗಿಯೇ ಉಳಿಯುತ್ತಿತ್ತು. ಬಟ್ ಹಾಗಾಗಿಲ್ಲ. ರೆಡ್ ಆರ್ಮಿಯ ಹರ್ಷೋತ್ಸವ ಸೂತಕದ ತವರಾಗಿ ಬದಲಾಗಿದ್ದು, ಪೊಲೀಸ್ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ಅನ್ನೋದೀಗ ಬಟಾ ಬಯಲಾಗ್ತಿದೆ.

ಕಮಿಷನರ್ ಅಮಾನತಿನ ಬೆನ್ನಲ್ಲೇ ಹುಟ್ಟಿದ ನೂರೆಂಟು ಪ್ರಶ್ನೆ
ಬೆಂಗಳೂರು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಗರ ಪೊಲೀಸ್ ಆಯುಕ್ತರನ್ನೇ ಅಮಾನತು ಮಾಡಲಾಗಿದೆ. ಹಾಗಂತಾ ಮಿಸ್ಟರ್ ದಯಾನಂದ್ ಅವತ್ತು ವಹಿಸಿದ ನಿರ್ಲಕ್ಷ್ಯಗಳೇ ಈ ಮಹಾ ಪ್ರಮಾದಕ್ಕೆ ಕಾರಣವಾಗಿಬಿಡ್ತಾ? ಅನ್ನೋ ಮಾತುಗಳೂ ಚರ್ಚೆಯಾಗುತ್ತಿವೆ. ಅದರಲ್ಲೂ ಬಹುಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ ಆರ್ ಸಿಬಿ ಸಂಭ್ರಮೋತ್ಸವಕ್ಕೆ ಅಪಾರ ಜನಸ್ತೋಮ ಹರಿದು ಬರಬಹುದು ಅಂತಾ ಅಂದಾಜಿಸಿ, ಸರ್ಕಾರವನ್ನು ಎಚ್ಚರಿಸುವಲ್ಲಿ ದಯಾನಂದ್ ವಿಫಲರಾಗಿದ್ದಾರೆ.
ಅಧಿಕಾರಿಗಳ ಸಭೆ ಕರೆದು ಪೂರ್ವ ತಯಾರಿ ಆಗಲೇ ಇಲ್ಲಾ
ಹಾಗೆ ನೋಡಿದ್ರೆ ಹಿಂದಿನ ದಿನ ಆರ್ ಸಿಬಿ ಗೆಲುವಿನ ಸಂಭ್ರಮ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಕಳೆಗಟ್ಟಿತ್ತು. ಬಹುತೇಕ ಖಾಕಿ ಸಿಬ್ಬಂದಿ ನಸುಕಿನವರೆಗೂ ಭದ್ರತಾ ಕಾರ್ಯದಲ್ಲಿ ಬ್ಯುಸಿಯಾಗಿದ್ದರು. ಹಾಗಂತಾ ಆ ರಾತ್ರಿ ಹೊತ್ತಿಗಾಗಲೇ ಕಮಿಷನರ್ ಆಗಿದ್ದ ದಯಾನಂದ್ ಅವರಿಗೆ, ನಾಳೆ ನಗರದಲ್ಲಿ ಸಂಭ್ರಮೋತ್ಸವ ಅನ್ನೋ ಸುಳಿವು ಸಿಕ್ಕಿತ್ತು. ಹೀಗಿದ್ದೂ, ವಿಜಯೋತ್ಸವದ ಭದ್ರತೆ ವಿಚಾರದಲ್ಲಿ ಇಲಾಖೆಯ ಹಿರಿಯಾಧಿಕಾರಿಗಳ ಸಭೆ ಕರೆದು ಹೊಣೆಗಾರಿಕೆಯನ್ನು ಹಂಚುವ ಕೆಲಸ ಆಗಲೇ ಇಲ್ಲಾ. ಎಷ್ಟೋ ಅಧಿಕಾರಿಗಳಿಗೆ ಯಾರ ಪಾತ್ರ ಏನು ಅನ್ನೋದರ ಅರಿವೇ ಇರ್ಲಿಲ್ಲ ಎನ್ನಲಾಗುತ್ತಿದೆ.

ದಟ್ಟಣೆ ನಿಯಂತ್ರಣ ಬಲು ಕಷ್ಟ ಅನ್ನೋದನ್ನು ಮನವರಿಕೆ ಮಾಡಲಿಲ್ಲ
ದಶಕಗಳಿಂದ ಇಲಾಖೆಯ ವಿವಿಧ ಹುದ್ದೆಗಳನ್ನು ಅಲಂಕರಿಸಿ ದಕ್ಷ ಅಧಿಕಾರಿಯ ಹಣೆಪಟ್ಟಿ ಹೊತ್ತಿದ್ದ ದಯಾನಂದ್ ಆರ್ ಸಿಬಿ ಸಂಭ್ರಮೋತ್ಸವ ವಿಚಾರದಲ್ಲಿ ಯಾಮಾರಿಬಿಟ್ರಾ. ನಿಜಕ್ಕೂ ಅವರದ್ದೇ ಇಲಾಖೆಯಲ್ಲಿ ಇಂಥದ್ದೊಂದು ಚರ್ಚೆ ಶುರುವಾಗಿದೆ. ಇಂಥಾ ದೊಡ್ಡ ಕಾರ್ಯಕ್ರಮವನ್ನು ಅಲ್ಪವೂ ತಯಾರಿ ಇಲ್ಲದೆ ನೇರ ಆಯೋಜನೆಗೆ ಸಮ್ಮತಿಸಿದ್ದು ದೊಡ್ಡ ತಪ್ಪು ಎನ್ನಲಾಗುತ್ತಿದೆ. ಎರಡು ಕಡೆ ಕಾರ್ಯಕ್ರಮ ಬೇಡ, ನಿಯಂತ್ರಣ ಕಷ್ಟ ಅನ್ನೋದನ್ನು ಸರ್ಕಾರಕ್ಕೆ ಮನದಟ್ಟು ಮಾಡುವಲ್ಲೂ ದಯಾನಂದ್ ವಿಫಲರಾದ್ರಾ? ಸಿಎಂ ಸಿದ್ದರಾಮಯ್ಯಗೆ ಅತ್ಯಾಪ್ತರಾಗಿರುವ ದಯಾನಂದ್, ಆತುರದಲ್ಲಿ ಕಾರ್ಯಕ್ರಮ ಆಯೋಜನೆ ಬೇಡವೇ ಬೇಡ ಅಂತಾ ವಿಶ್ಲೇಷಿಸುವಲ್ಲಿ ಸೋತುಬಿಟ್ರಾ?
ದಟ್ಟಣ ಮಿತಿ ಮೀರುತ್ತಿದ್ದರೂ ರ್ತಿದ್ರೂ ಮೆಟ್ರೋ ಬಂದ್ ಯಾಕೆ ಮಾಡ್ಲಿಲ್ಲ?
ಇತ್ತ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಾಗರೋಪಾದಿಯಲ್ಲಿ ಜನ ಹರಿದುಬರೋದಕ್ಕೆ ಶುರುಮಾಡಿದ್ದರು. ಅದರಲ್ಲೂ ನಗರದ ಹೃದಯ ಭಾಗದಲ್ಲಿರೋ ಚಿನ್ನಸ್ವಾಮಿ ಸ್ಟೇಡಿಯಂಗೆ ಮೆಟ್ರೋ ಅತ್ಯಂತ ಸುಲಭ ಸಂಚಾರ ಮಾರ್ಗ. ಪರಿಸ್ಥಿತಿ ಕೈಮೀರ್ತಿದೆ ಅಂತಾ ತಿಳಿದಾಗ, ಮೆಟ್ರೋ ಸಂಚಾರವನ್ನ ಬಂದ್ ಮಾಡುವ ನಿರ್ಧಾರ ಯಾಕೆ ಕೈಗೊಳ್ಳಲಿಲ್ಲ ಅನ್ನೋ ಪ್ರಶ್ನೆ ಕೂಡಾ ಆವರಿಸುತ್ತಿದೆ.

ಸಾವಿನ ಸಂಖ್ಯೆ ಸಿಎಂಗೆ ತಲುಪಿಸಲು ಹಿಂದೇಟು ಹಾಕಿದ್ದೇಕೆ?
ವಿಧಾನಸೌಧ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಂಭ್ರಮವೆಲ್ಲಾ ಚಿನ್ನಸ್ವಾಮಿ ಮೈದಾನಕ್ಕೆ ಶಿಫ್ಟ್ ಆಗಿತ್ತು. ಈ ವೇಳೆ ನುಗ್ಗಿ ಬಂದ ಅಪಾರ ಅಭಿಮಾನಿಗಳನ್ನು ನಿಯಂತ್ರಿಸಲು ಅತ್ಯಲ್ಪ ಸಿಬ್ಬಂದಿಯನ್ನು ನಿಯೋಜಿಸಿದ್ದು, ಸೂಕ್ತ ಬ್ಯಾರಿಕೇಡ್ ವ್ಯವಸ್ಥೆ ಮಾಡಿಕೊಳ್ಳದ್ದು ಕೂಡಾ ದೊಡ್ಡ ಹಿನ್ನಡೆಯೇ. ಹಾಗಂತಾ ಅವತ್ತು ಮಧ್ಯಾಹ್ನ 3.45ರ ಹೊತ್ತಿಗೆ 11 ಮಂದಿ ಸಾವನಪ್ಪಿದ್ರೂ, ಈ ವಿಚಾರ ಸಿಎಂಗೆ ಗೊತ್ತಾಗಿದ್ದು ಮಾತ್ರ ಸಂಜೆ 5.45. ಇಂಥಾ ವಿಚಾರವನ್ನು ಸಿಎಂಗೆ ಮುಟ್ಟಿಸುವಲ್ಲಿ ದಯಾನಂದ್ ತಡ ಮಾಡಿದ್ದರ ಹಿಂದಿನ ಉದ್ದೇಶವೇನು?
ಐಪಿಎಸ್-ಕೆಎಸ್ ಸಿಎ ನಡುವಿನ ಕಿತ್ತಾಟ ಬೀದಿಗೆ ಬಂತಾ?
ಇನ್ನೊಂದು ಗಮನಾರ್ಹ ವಿಚಾರವೆಂದ್ರೆ, ನಗರದ ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಕ್ರಿಕೆಟ್ ಸಂಸ್ಥೆ ಮೇಲೆ ಕೋಪವಿದೆಯಾ. ಹೌದು, ಪ್ರತಿ ಬಾರಿ ಕ್ರಿಕೆಟ್ ಪಂದ್ಯಗಳು ನಡೆದಾಗಿ ಹಿರಿಯ ಅಧಿಕಾರಿಗಳಿಗೆ ಪಾಸ್ ನೀಡುವ ವಿಚಾರದಲ್ಲಿ ಶೀತಲ ಸಮರ ಇದ್ದದ್ದೇ. ಈ ತಾತ್ಸಾರ ಮನೋಭವದಿಂದಲೇ ಅವತ್ತು ಭದ್ರತೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಲಾಯ್ತಾ ಅನ್ನೋ ಗುಮಾನಿಯೂ ಇದೆ.
ಅದ್ ಏನೇ ಇರಲಿ. ದಯಾನಂದ್ ಓರ್ವ ದಕ್ಷ ಅಧಿಕಾರಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಈ ಹಿಂದೆ 2015ರಲ್ಲಿ ಖುದ್ದು ಸಿದ್ದರಾಮಯ್ಯರೇ ದಯಾನಂದ್ ರನ್ನ ಮೈಸೂರು ಪೊಲೀಸ್ ಆಯುಕ್ತರನ್ನಾಗಿ ನೇಮಿಸಿದ್ರು. ಈ ನಂಬಿಕೆಯನ್ನ ಅವರೂ ಉಳಿಸಿಕೊಂಡಿದ್ರು. ಇದೇ ಭರವಸೆ ಮೇಲೆಯೇ ದಯಾನಂದ್ ಹೆಗಲಿಗೆ ಹೊಣೆ ಹೊರಿಸಿ ಸಿಎಂ ನೆಮ್ಮದಿಯಿಂದಿದ್ರು. ಆದ್ರೆ ಅದೇ ಅಧಿಕಾರಿಯ ನಿರ್ಲಕ್ಷ್ಯ ಇವತ್ತು ಸರ್ಕಾರಕ್ಕೆ ಕಪ್ಪು ಚುಕ್ಕೆ ಅಂಟುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.