ಶ್ರೀನಗರ: ಜಮ್ಮು-ಕಾಶ್ಮಿರದ ಗಡಿಯಲ್ಲಿ ಪಾಕಿಸ್ತಾನದ ಶೆಲ್ ದಾಳಿ ಮುಂದುವರಿದಿದೆ. ಭಾರತವು ವಾಯುದಾಳಿ, ಕ್ಷಿಪಣಿ ದಾಳಿ ಮಾಡುತ್ತಿದ್ದರೂ ಗಡಿಯಲ್ಲಿ ಪಾಕಿಸ್ತಾನ ಉಪಟಳ ಮಾಡುತ್ತಿದೆ. ಪಾಕಿಸ್ತಾನವು ಶೆಲ್ ದಾಳಿ ಮಾಡಿದ ಪರಿಣಾಮ ರಾಜೌರಿಯಲ್ಲಿ ಜಮ್ಮು-ಕಾಶ್ಮೀರ ಆಡಳಿತಾಧಿಕಾರಿ ರಾಜ್ ಕುಮಾರ್ ಥಪ್ಪಾ ಅವರು ಮೃತಪಟ್ಟಿದ್ದಾರೆ. ಇದರ ಕುರಿತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
“ಜಮ್ಮು-ಕಾಶ್ಮೀರದ ರಾಜೌರಿಯಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ರಾಜೌರಿ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ರಾಜ್ ಕುಮಾರ್ ಥಪ್ಪಾ ಅವರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಹತ್ಯೆಗೀಡಾದ ಅಧಿಕಾರಿ ರಾಜ್ ಕುಮಾರ್ ತಪ್ಪಾ ನಿನ್ನೆ ತಮ್ಮೊಂದಿಗೆ ಆನ್ ಲೈನ್ ಸಭೆಯಲ್ಲಿ ಭಾಗವಹಿಸಿದ್ದರು ಮತ್ತು ಜಿಲ್ಲೆಯಲ್ಲಿ ಉಪ ಮುಖ್ಯಮಂತ್ರಿಯೊಂದಿಗೆ ಇದ್ದರು. ದಕ್ಷ ಅಧಿಕಾರಿಯನ್ನು ನಾವು ಕಳೆದುಕೊಂಡಿದ್ದೇವೆ” ಎಂದು ಒಮರ್ ಅಬ್ದುಲ್ಲಾ ಪೋಸ್ಟ್ ಮಾಡಿದ್ದಾರೆ.
“ರಾಜ್ ಕುಮಾರ್ ಥಪ್ಪಾ ಅವರ ಅಗಲಿಕೆಯು ತುಂಬಲಾರದ ನಷ್ಟವಾಗಿದೆ. ಆಡಳಿತ ಸೇವೆಗಳ ಸಮರ್ಪಿತ ಅಧಿಕಾರಿಯನ್ನು ನಾವು ಕಳೆದುಕೊಂಡಿದ್ದೇವೆ. ನಿನ್ನೆಯಷ್ಟೇ ಅವರು ಜಿಲ್ಲೆಯಾದ್ಯಂತ ಉಪ ಮುಖ್ಯಮಂತ್ರಿಯೊಂದಿಗೆ ಇದ್ದರು ಮತ್ತು ನಾನು ಅಧ್ಯಕ್ಷತೆ ವಹಿಸಿದ್ದ ಆನ್ ಲೈನ್ ಸಭೆಯಲ್ಲಿ ಭಾಗವಹಿಸಿದ್ದರು. ಇಂದು ರಾಜೌರಿ ಪಟ್ಟಣವನ್ನು ಗುರಿಯಾಗಿಸಿಕೊಂಡು ಪಾಕ್ ಶೆಲ್ ದಾಳಿ ನಡೆಸಿದಾಗ ಅಧಿಕಾರಿಯ ನಿವಾಸಕ್ಕೆ ಗುಂಡು ಹಾರಿಸಲಾಯಿತು. ದಾಳಿಯಲ್ಲಿ ರಾಜ್ ಕುಮಾರ್ ಥಪ್ಪಾ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಪೋಸ್ಟ್ ಮಾಡಿದ್ದಾರೆ.
ಪಾಕಿಸ್ತಾನದ ಶೆಲ್ ದಾಳಿಗೆ ಕಾಶ್ಮೀರ ಗಡಿಯಲ್ಲಿ ಭಾರತವೂ ಸರಿಯಾಗಿಯೇ ತಿರುಗೇಟು ನೀಡಿದೆ. ಜಮ್ಮು ಬಳಿಯ ಪಾಕಿಸ್ತಾನದ ಉಗ್ರರ ನೆಲೆಯೊಂದನ್ನು ಭಾರತೀಯ ಸೇನೆಯು ಧ್ವಂಸಗೊಳಿಸಿದೆ. ಭಾರತದ ಸುಮಾರು 26 ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ರಾತ್ರೋರಾತ್ರಿ ದಾಳಿ ನಡೆಸಿದೆ. ಇದೇ ವೇಳೆ, ಭಾರತವು ಪಾಕಿಸ್ತಾನದ ನೂರಾರು ಡ್ರೋನ್ ಗಳನ್ನು ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ.