ನವದೆಹಲಿ: ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್ಸಿಆರ್) ಧೂಳಿನ ಬಿರುಗಾಳಿ ಮತ್ತು ಧಾರಾಕಾರ ಮಳೆಯು(Delhi Rain) ಭಾರೀ ಅವಾಂತರ ಸೃಷ್ಟಿಸಿದೆ. ದಿಲ್ಲಿಯ ದ್ವಾರಕಾದಲ್ಲಿ ಭಾರಿ ಗಾಳಿಗೆ ಮರದ ಮೇಲೆ ಮರ ಬಿದ್ದು ಮಹಿಳೆ ಮತ್ತು ಆಕೆಯ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ವಿಪರೀತ ಮಳೆಯಿಂದಾಗಿ ಇಂದು ಬೆಳಿಗ್ಗೆ ಸುಮಾರು 200 ವಿಮಾನಗಳ ಸಂಚಾರ ವಿಳಂಬವಾಗಿವೆ.
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಮೂರು ವಿಮಾನಗಳ ಮಾರ್ಗ ಬದಲಾಯಿಸಿ ಅಹಮದಾಬಾದ್ ಮತ್ತು ಜೈಪುರಕ್ಕೆ ಕಳುಹಿಸಲಾಗಿದೆ. ಬೆಂಗಳೂರು-ದೆಹಲಿ ಮತ್ತು ಪುಣೆ-ದೆಹಲಿ ವಿಮಾನಗಳನ್ನೂ ಜೈಪುರಕ್ಕೆ ತಿರುಗಿಸಲಾಗಿದೆ.

ಭಾರೀ ಬಿರುಗಾಳಿಯಿಂದಾಗಿ ಮರಗಳು ತಂತಿಗಳ ಮೇಲೆ ಬಿದ್ದಿದ್ದರಿಂದ ಸುಮಾರು 15 ರಿಂದ 20 ರೈಲುಗಳು ವಿಳಂಬವಾಗಿದ್ದು, ದೆಹಲಿ ವಿಭಾಗದಲ್ಲಿ ರೈಲ್ವೆ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ.
ದ್ವಾರಕಾ, ಕಾನ್ಪುರ, ಸೌತ್ ಎಕ್ಸ್ಟೆನ್ಷನ್ ರಿಂಗ್ ರಸ್ತೆ, ಮಿಂಟೋ ರಸ್ತೆ, ಲಜಪತ್ ನಗರ ಮತ್ತು ಮೋತಿ ಬಾಗ್ನಂತಹ ಪ್ರದೇಶಗಳು ಸೇರಿದಂತೆ ದೆಹಲಿಯ ಅನೇಕ ಭಾಗಗಳಲ್ಲಿ ರಸ್ತೆಗಳು ಜಲಾವೃತವಾಗಿವೆ.
ಗಾಳಿಯಿಂದಾಗಿ ಹಲವು ಮರಗಳು ಧರಾಶಾಹಿಯಾಗಿವೆ. ಭಾರೀ ಮಳೆಯಾಗುತ್ತಿರುವ ಕಾರಣ ನಾಗರಿಕರಿಗೆ ಮನೆಯೊಳಗೇ ಇರುವಂತೆ ಸೂಚಿಸಲಾಗಿದೆ. ದೆಹಲಿಯಲ್ಲಿ ತಾಪಮಾನವು 19.8 ಡಿಗ್ರಿ ಸೆಲ್ಸಿಯಸ್ ಆಗಿದ್ದು, ದೆಹಲಿಯಾದ್ಯಂತ ಭಾರಿ ಮಳೆ ಮತ್ತು ಗಂಟೆಗೆ 70-80 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಮೂರು ಗಂಟೆಗಳ ಅವಧಿಯಲ್ಲಿ, ನಗರದ ಪ್ರಾಥಮಿಕ ವೀಕ್ಷಣಾಲಯವಾದ ಸಫ್ದರ್ಜಂಗ್ ಹವಾಮಾನ ಕೇಂದ್ರದ ವ್ಯಾಪ್ತಿಯಲ್ಲಿ 77 ಮಿ.ಮೀ ಮಳೆಯಾಗಿದೆ. ಲೋಧಿ ರಸ್ತೆಯಲ್ಲಿ 78 ಮಿ.ಮೀ, ಪಾಲಂನಲ್ಲಿ 30 ಮಿ.ಮೀ, ನಜಾಫ್ಗಢದಲ್ಲಿ 19.5 ಮಿ.ಮೀ ಮತ್ತು ಪಿತಾಂಪುರದಲ್ಲಿ 32 ಮಿ.ಮೀ ಮಳೆಯಾಗಿದೆ. ಹವಾಮಾನ ಇಲಾಖೆಯು ಶನಿವಾರದವರೆಗೆ ರಾಷ್ಟ್ರ ರಾಜಧಾನಿಗೆ ಯೆಲ್ಲೋ ಅಲರ್ಟ್ ನೀಡಿದ್ದು, ಭಾರೀ ಮಳೆ, ಗುಡುಗು ಮತ್ತು ಗಾಳಿಯ ಮುನ್ಸೂಚನೆ ನೀಡಿದೆ.