ಕೋಲಾರ: ಜಾತಿಗಣತಿ ವರದಿ ಜಾರಿಗೆ ಕೆಲವು ಶಾಸಕರು ಹಾಗೂ ಸಚಿವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಜಾತಿ ಗಣತಿ ಜಾರಿ ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಜಾತಿ ಗಣತಿ ಜಾರಿ ಆಗದಿದ್ದರೆ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಕುರುಬರ ಸಂಘದ ಪ್ರಾಧಾನ ಕಾರ್ಯದರ್ಶಿ ಅಂಜನಿ ಸೋಮಣ್ಣ ಹೇಳಿದ್ದಾರೆ.
ಜಾತಿಗಣತಿ ವಿರೋಧಿಸುವ ಶಾಸಕರು ಮುಂದೆ ಹೇಗೆ ಗೆಲ್ಲುತ್ತಾರೆ ಎಂಬುವುದನ್ನು ನೋಡೋಣ. ಕೂಡಲೇ ಸರ್ಕಾರಿ ಜಾತಿ ಸಮೀಕ್ಷೆಯನ್ನು ಜಾರಿಗೊಳಿಸಬೇಕು. ಯಾರೇ ವಿರೋಧ ಮಾಡಿದರೂ ಕೂಡ ಜಾತಿಗಣತಿ ವರದಿ ಅನುಷ್ಟಾನಕ್ಕೆ ತರಬೇಕು. ನಮ್ಮ ಭಾಗವನ್ನು ನಮಗೆ ಕೊಡಿ, ನಾವು ಯಾರ ತಟ್ಟೆಗೂ ಕೈ ಹಾಕುತ್ತಿಲ್ಲ. ವರದಿ ಜಾರಿಮಾಡದಿದ್ದರೆ, ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವರದಿಯನ್ನು ಸ್ವೀಕರಿಸಲೇ ಇಲ್ಲ. ಹೀಗಾಗಿ ಅವರಿಗೆ ವರದಿಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಾಮಾಜಿಕ ಸ್ಥಿತಿಗತಿಗಳಂತೆ ಆಯಾ ಜಾತಿಗನುಗುಣವಾಗಿ ಮೀಸಲಾತಿ ನೀಡಿ. ಸಮೀಕ್ಷೆ ಕುರಿತು ಚರ್ಚೆ ನಡೆಯಲಿ, ತಪ್ಪಿದ್ದರೆ ಪರಿಶೀಲನೆ ಆಗಲಿ. ವರದಿ ಜಾರಿಯಾಗದಿದ್ದರೆ, ಪ್ರತಿಯೊಬ್ಬ ಶಾಸಕರ ಮನೆಗೂ ಮುತ್ತಿಗೆ ಹಾಕುತ್ತೇವೆ. ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಶಾಸಕರಿಗೂ ಘೇರಾವ್ ಹಾಕುತ್ತೇವೆ. ಸಿದ್ದರಾಮಯ್ಯ ಅವರನ್ನು ಮುಟ್ಟಿದರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಬರುವುದು ಕಷ್ಟ ಎಂದು ಹೇಳಿದ್ದಾರೆ.