ನವದೆಹಲಿ: ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ (Delhi Election Result 2025) ಸೋಲುಂಡು, ದೆಹಲಿ ಗದ್ದುಗೆ ಏರುವಲ್ಲಿ ವಿಫಲವಾಗಿದ್ದ ಬಿಜೆಪಿ ಈಗ ಭರ್ಜರಿ ಗೆಲುವಿನತ್ತ ಸಾಗುತ್ತಿದೆ. ಇದರ ಬೆನ್ನಲ್ಲೇ ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ಅದರಲ್ಲೂ, ವಿದೇಶಾಂಗ ಖಾತೆ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಬನ್ಸೂರಿ ಸ್ವರಾಜ್ (Bansuri Swaraj) ಅವರಿಗೆ ಪಟ್ಟ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಬನ್ಸೂರಿ ಸ್ವರಾಜ್ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದು ಈಗ ಸಿಎಂ ರೇಸ್ ನಲ್ಲಿದ್ದಾರೆ. ಎಲ್.ಕೆ.ಆಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಅವರ ಕ್ಷೇತ್ರವಾಗಿದ್ದ ನವದೆಹಲಿ ಲೋಕಸಭೆ ಕ್ಷೇತ್ರದಲ್ಲಿ ಇವರು ಗೆಲುವು ಸಾಧಿಸಿದ್ದಾರೆ. ಇವರನ್ನೇ ದೆಹಲಿ ಮುಖ್ಯಮಂತ್ರಿಯನ್ನಾಗಿ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ರೇಸ್ ನಲ್ಲಿ ಇರುವವರು ಯಾರು?
ಬಿಜೆಪಿಯು ಚುನಾವಣೆ ಪೂರ್ವದಲ್ಲಿ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿರಲಿಲ್ಲ. ಹಾಗಾಗಿ, ಸಿಎಂ ರೇಸ್ ನಲ್ಲಿ ಈಗ ಹಲವು ನಾಯಕರಿದ್ದಾರೆ. ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿರುವ ಪರ್ವೇಶ್ ವರ್ಮಾ, ರಮೇಶ್ ಬಿಧೂರಿ, ಸ್ಮೃತಿ ಇರಾನಿ, ದುಶ್ಯಂತ್ ಗೌತಮ್ ಸೇರಿ ಹಲವು ನಾಯಕರು ಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಎಂದಿನಂತೆ ಬಿಜೆಪಿಯು ಅಚ್ಚರಿಯ ಅಭ್ಯರ್ಥಿಯನ್ನೇ ಸಿಎಂ ಎಂದು ಕೂಡ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.