ಬೆಂಗಳೂರು: ಯಾರು ಎಷ್ಟೇ ಬಟ್ಟೆ ಹರಿದುಕೊಂಡು ಕಿರುಚಾಡಿದರೂ ನಾನು ರಾಜೀನಾಮೆ ನೀಡಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿಯು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಪಟ್ಟು ಹಿಡಿದಿದ್ದು, ಸಚಿವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ಯಾವುದಾದರೂ ದಾಖಲೆ ಇದ್ದರೆ ತೋರಿಸಲಿ. ನನ್ನ ರಾಜೀನಾಮೆ ಕೇಳಲು ವಿಜಯೇಂದ್ರ ಸುಪ್ರೀಂಕೋರ್ಟಾ? ಎಂದು ಪ್ರಶ್ನಿಸಿದ ಅವರು, ರಾಜು ಕಪನೂರ್ ನನ್ನ ಆಪ್ತ ಅಲ್ಲ ಎಂದು ನಾನು ಹೇಳಿಯೇ ಇಲ್ಲ. ರಾಜು ಕಪನೂರು ಕಾಂಗ್ರೆಸ್ ಸೇರುವ ಮೊದಲು ಬಿಜೆಪಿಯಲ್ಲಿದ್ದರು. ಅವರು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷರಾಗಿದ್ದರು ಎಂದು ಗುಡುಗಿದ್ದಾರೆ.
ವಿಜಯೇಂದ್ರ ವಿರುದ್ಧ ಮನಿ ಲ್ಯಾಂಡರಿಂಗ್ ಕೇಸ್ ದಾಖಲಾಗಿದೆ. ಹಾಗಾದರೆ ಅವರೇಕೆ ರಾಜೀನಾಮೆ ನೀಡುತ್ತಿಲ್ಲ. ಕಲಬುರಗಿ ಮುತ್ತಿಗೆಗೆ ಎಷ್ಟು ಜನ ಬರ್ತೀರಿ ಅಂತಾ ಮೊದಲೇ ಹೇಳಿ, ಅಷ್ಟು ಜನರಿಗೆ ಟೀ ವ್ಯವಸ್ಥೆ ಮಾಡ್ತೇವೆ, ಇಲ್ಲದಿದ್ದರೆ ನೀರನ್ನೂ ಕೊಟ್ಟಿಲ್ಲ ಅಂತಾ ಪ್ರತಿಭಟನೆ ಮಾಡುವಂತವರು ನೀವು ಎಂದು ವ್ಯಂಗ್ಯವಾಡಿದ್ದಾರೆ.