ರಾಮನಗರ: ರಾಜ್ಯ ಸರ್ಕಾರ ಕಿತ್ತೊಗೆಯುವವರೆಗೂ ನಾನು ವಿರಮಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ನಾನು ಮೊಮ್ಮಗನಿಗಾಗಿ ಪ್ರಚಾರಕ್ಕೆ ಬಂದಿಲ್ಲ. ಈ ಸರ್ಕಾರ ಕಿತ್ತೊಗೆಯಲು ಬಂದಿದ್ದೇನೆ. ನನ್ನ ಉಸಿರು ಇರುವವರೆಗೂ ರಾಜಕೀಯ ಮಾಡುತ್ತೇನೆ. ನಿಖಿಲ್ ಗೆದ್ದ ಮೇಲೆಯೂ ನಾನು ಮನೆಯಲ್ಲಿ ಮಲಗಲ್ಲ. ಆಮೇಲೆ ಕೂಡ ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ನಾವು ಬಡತನದಿಂದ ಬಂದವರು. ಬಡತನ ಕಂಡು ಕಷ್ಟದಿಂದ ಮೇಲೆ ಬಂದವರು. ಹೀಗಾಗಿ ನಮಗೆ ಕಣ್ಣೀರು ಬಳುವಳಿಯಾಗಿ ಬಂದಿದೆ. ರೈತರ, ಬಡ ಜನರ ಕಷ್ಟ ಸುಖಗಳ ಅರಿವಿದೆ. ಅವರ ಕಷ್ಟಕ್ಕೆ ಸ್ಪಂದಿಸುವ ಹೃದಯ ಯಾರಿಗಿರುತ್ತೋ ಅವರಿಗೆ ಮಾತೃ ಹೃದಯ ಇರುತ್ತದೆ ಎಂದು ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ಚನ್ನಪಟ್ಟಣದಲ್ಲಿ 6 ತಿಂಗಳು ಪ್ರವಾಸ ಮಾಡಿದ್ದಾರೆ. ರಾಮನಗರವನ್ನು ಜಿಲ್ಲೆ ಮಾಡಿದ್ದು ಕುಮಾರಸ್ವಾಮಿ. ಆದರೆ, ಈಗ ರಾಮನಗರವನ್ನು ಬೆಂಗಳೂರಿಗೆ ಸೇರಿಸಲು ಡಿಕೆಶಿ ಮುಂದಾಗಿದ್ದಾರೆ. ಇಂಥವರಿಂದ ರಾಜ್ಯ ಉದ್ಧಾರ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ಸರ್ಕಾರ ಬಡವರ ಹಣವನ್ನು ರಾಜಕೀಯಕ್ಕೆ ಬಳಕೆ ಮಾಡುತ್ತಿದೆ. ವಾಲ್ಮೀಕಿ ಪ್ರಕರಣದ 80 ಕೋಟಿ ರೂ. ಹಣವನ್ನು ತೆಲಂಗಾಣ ರಾಜಕೀಯಕ್ಕೆ ಬಳಕೆ ಮಾಡಿದೆ. ಈಗ ಬಡವರ ದುಡ್ಡು ತಂದು ಸುರಿಯಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.