ನವದೆಹಲಿ: ಭಾರತದ ಶಿಕ್ಷಣ ವ್ಯವಸ್ಥೆಯು ಮಕ್ಕಳಿಗೆ ದೇಶದ ಇತಿಹಾಸದ ಬಗ್ಗೆ ಕಲಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂಬ ಚರ್ಚೆಯು ದೇಶಾದ್ಯಂತ ನಡೆಯುತ್ತಿರುವ ಹೊತ್ತಲ್ಲೇ, ಈ ಚರ್ಚೆಯಲ್ಲೀಗ ನಟ ಆರ್. ಮಾಧವನ್(Actor Madhavan) ಅವರೂ ಭಾಗಿಯಾಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾಧವನ್, ನಮ್ಮ ಪಠ್ಯಪುಸ್ತಕಗಳಲ್ಲಿ ದಕ್ಷಿಣದ ಸಾಮ್ರಾಜ್ಯಗಳ ಬಗ್ಗೆ ಹೆಚ್ಚಿನ ಉಲ್ಲೇಖವೇ ಇಲ್ಲ. ಆದರೆ ಮೊಘಲ್ ಇತಿಹಾಸಕ್ಕೆ ‘ಎಂಟು ಅಧ್ಯಾಯಗಳ’ನ್ನೇ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತದ ರಾಜವಂಶಗಳು ರೋಮ್ವರೆಗೂ ವಿಸ್ತರಿಸಿದೆ. ಆದರೆ, ಅದನ್ನು ಕಲಿಸುವ ಬದಲು ಭಾರತೀಯ ಮಕ್ಕಳು ಕೇವಲ ಬ್ರಿಟಿಷರು ಹಾಗೂ ಮೊಘಲ್ ದೊರೆಗಳ ಕಥೆಗಳನ್ನು, ಅವರ ವೈಭವೋಪೇತ ಸಾಮ್ರಾಜ್ಯಗಳ ಬಗ್ಗೆ ಕಲಿಯುತ್ತಾ ಬೆಳೆಯುವಂತಾಗಿದೆ ಎಂದು ಮಾಧವನ್ ಹೇಳಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೊಂದಿಗೆ ‘ಕೇಸರಿ: ಚಾಪ್ಟರ್ 2’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಮಾಧವನ್, ವಿದ್ಯಾರ್ಥಿಗಳು ಪಠ್ಯಪುಸ್ತಕಗಳಲ್ಲಿ ಬೌದ್ಧ ಧರ್ಮ, ಹಿಂದೂ ಧರ್ಮ ಮತ್ತು ಜೈನ ಧರ್ಮದ ಬಗ್ಗೆ ಸಾಕಷ್ಟು ಓದುತ್ತಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ವಿಶ್ವದ ಅತ್ಯಂತ ಹಳೆಯ ಭಾಷೆ’ ಎಂದು ಪರಿಗಣಿಸಲಾದ ತಮಿಳು ಭಾಷೆಯ ಬಗ್ಗೆ ಪಠ್ಯಕ್ರಮದಲ್ಲಿ ಇಲ್ಲ. ಇದನ್ನು ಹೇಳಿದ್ದಕ್ಕಾಗಿ ನಾನು ಟೀಕೆಗೆ ಗುರಿಯಾಗಬಹುದು. ಆದರೂ ನಾನು ನನಗನಿಸಿದ್ದನ್ನು ಹೇಳುತ್ತೇನೆ. ನಾನು ಶಾಲೆಯಲ್ಲಿ ಇತಿಹಾಸ ಪಾಠ ಕಲಿಯುವಾಗ, ಮೊಘಲರ ಬಗ್ಗೆ ಎಂಟು ಅಧ್ಯಾಯಗಳು, ಹರಪ್ಪ ಮತ್ತು ಮೊಹೆಂಜೊದಾರೊ ನಾಗರಿಕತೆಗಳ ಬಗ್ಗೆ ಎರಡು, ಬ್ರಿಟಿಷ್ ಆಳ್ವಿಕೆ ಮತ್ತು ಸ್ವಾತಂತ್ರ್ಯ ಹೋರಾಟದ ಬಗ್ಗೆ ನಾಲ್ಕು ಅಧ್ಯಾಯಗಳು ಮತ್ತು ದಕ್ಷಿಣದ ಸಾಮ್ರಾಜ್ಯಗಳ ಬಗ್ಗೆ ಅಂದರೆ ಚೋಳರು, ಪಾಂಡ್ಯರು, ಪಲ್ಲವರು ಮತ್ತು ಚೇರರ ಬಗ್ಗೆ ಕೇವಲ ಒಂದು ಅಧ್ಯಾಯವಿತ್ತು ಎಂದಿದ್ದಾರೆ.
“ಬ್ರಿಟಿಷರು ಮತ್ತು ಮೊಘಲರು ನಮ್ಮನ್ನು ಸುಮಾರು 800 ವರ್ಷಗಳ ಕಾಲ ಆಳಿದರು. ಆದರೆ ಚೋಳ ಸಾಮ್ರಾಜ್ಯವು 2,400 ವರ್ಷಗಳಷ್ಟು ಹಳೆಯದು. ಚೋಳರು ಸಮುದ್ರ ಪ್ರಯಾಣ ಮತ್ತು ನೌಕಾ ಶಕ್ತಿಯ ಪ್ರವರ್ತಕರಾಗಿದ್ದರು. ಅವರು ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡಲು ರೋಮ್ ವರೆಗೆ ವಿಸ್ತರಿಸಿದ ಮಾರ್ಗಗಳನ್ನು ಹೊಂದಿದ್ದರು. ನಮ್ಮ ಇತಿಹಾಸದ ಆ ಭಾಗ ಎಲ್ಲಿದೆ? ನಮ್ಮ ಪ್ರಬಲ ನೌಕಾಪಡೆಗಳೊಂದಿಗೆ ನಾವು ಅಂಕೋರ್ ವಾಟ್ ವರೆಗೆ ದೇವಾಲಯಗಳನ್ನು ನಿರ್ಮಿಸಿರುವ ಉಲ್ಲೇಖ ಎಲ್ಲಿದೆ? ಜೈನ ಧರ್ಮ, ಬೌದ್ಧ ಧರ್ಮ ಮತ್ತು ಹಿಂದೂ ಧರ್ಮವು ಚೀನಾದವರೆಗೂ ಹರಡಿತು. ಕೊರಿಯಾದ ಜನರು ಅರ್ಧ ತಮಿಳು ಮಾತನಾಡುತ್ತಾರೆ. ಇದಕ್ಕೆ ಕಾರಣ ನಮ್ಮ ಭಾಷೆ ಅಷ್ಟು ದೂರ ತಲುಪಿರುವುದು. ಆದರೆ, ಇವೆಲ್ಲವನ್ನೂ ಕೇವಲ ಒಂದು ಅಧ್ಯಾಯಕ್ಕೆ ಸೀಮಿತಗೊಳಿಸಲಾಗಿದೆ. ನಮ್ಮ ಮಕ್ಕಳು ಅಷ್ಟನ್ನೇ ಕಲಿಯುತ್ತಾರೆ” ಎಂದು ಮಾಧವನ್ ಹೇಳಿದ್ದಾರೆ.
ಅಸಮಂಜಸ ಇತಿಹಾಸ ಪಾಠಗಳನ್ನು ಪರಿಚಯಿಸಿದ್ದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂಬ ಖಡಕ್ ಪ್ರಶ್ನೆಯನ್ನೂ ಮಾಧವನ್ ಕೇಳಿದ್ದಾರೆ. “ಇದು ಯಾರ ನಿರೂಪಣೆ? ಪಠ್ಯಕ್ರಮವನ್ನು ನಿರ್ಧರಿಸಿದವರು ಯಾರು? ತಮಿಳು ವಿಶ್ವದ ಅತ್ಯಂತ ಹಳೆಯ ಭಾಷೆ. ಆದರೆ ಅದರ ಬಗ್ಗೆ ಯಾರಿಗೂ ತಿಳಿದಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಅಡಗಿರುವ ವೈಜ್ಞಾನಿಕ ಜ್ಞಾನವನ್ನು ಇದೀಗ ಅಪಹಾಸ್ಯ ಮಾಡಲಾಗುತ್ತಿದೆ” ಎಂದೂ ಹೇಳಿದ್ದಾರೆ.
ಹನ್ನೆರಡನೇ ತರಗತಿಯ ಪಠ್ಯಕ್ರಮದಿಂದ ಮೊಘಲರು ಮತ್ತು ದೆಹಲಿ ಸುಲ್ತಾನರಿಗೆ ಸಂಬಂಧಿಸಿದ ಪಾಠಗಳನ್ನು ತೆಗೆದುಹಾಕುವ ಎನ್ಸಿಇಆರ್ಟಿ ನಿರ್ಧಾರದ ನಂತರ ಶಾಲಾ ಪಠ್ಯಕ್ರಮದಲ್ಲಿ ಐತಿಹಾಸಿಕ ಪ್ರಾತಿನಿಧ್ಯದ ಬಗ್ಗೆ ನಡೆಯುತ್ತಿರುವ ಚರ್ಚೆಯ ಮಧ್ಯೆಯೇ ಮಾಧವನ್ ಅವರ ಈ ಹೇಳಿಕೆಗಳು ಹೊರಬಿದ್ದಿವೆ.