ರಾಮನಗರ: ವೈದ್ಯರ ನಿರ್ಲಕ್ಷ್ಯಕ್ಕೆ 6 ತಿಂಗಳ ಹೆಣ್ಣು ಮಗು ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.
ರಾಮನಗರದ ಚಾಮುಂಡೇಶ್ವರಿ ಬಡಾವಣೆಯ ನಿವಾಸಿ ಶಿವರಾಜು ಎಂಬುವವರ ಮಗು ಶರಣ್ಯ ಸಾವನ್ನಪ್ಪಿದೆ. ವೈದ್ಯರು ಮಗುವಿಗೆ ಹೈಡೋಸ್ ಇಂಜೆಕ್ಷನ್ ನೀಡಿದ ಪರಿಣಾಮ ಮಗು ಸಾವನ್ನಪಿದೆ ಎನ್ನಲಾಗಿದೆ. ವೈದ್ಯ ಡಾ. ಮೊಹಮದ್ ಸೈಫುಲ್ಲಾ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ರಾಮನಗರದ ಬಾಲಗೇರಿ ಏರಿಯಾದಲ್ಲಿ ಮೊಹಮದ್ ಸೈಫುಲ್ಲಾ ಅವರು ಅಲ್-ಖೈರ್ ಫೌಂಡೇಶನ್ ಹೆಸರಿನ ಕ್ಲಿನಿಕ್ ನಡೆಸುತ್ತಿದ್ದರು. ಮಗುವಿನ ಕಾಲಿನಲ್ಲಿ ಗಂಟು ಬಂದಿದೆ ಎಂದು ನಿನ್ನೆ ರಾತ್ರಿ ಕುಟುಂಬಸ್ಥರು ಚಿಕಿತ್ಸೆಗಾಗಿ ಮಗುವನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗುವಿಗೆ ಹೈಡೋಸ್ ಇಂಜೆಕ್ಷನ್ ನೀಡಿರುವ ಆರೋಪ ಕೇಳಿ ಬಂದಿದೆ.
ಮಗು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕ್ಲಿನಿಕ್ ಸೀಜ್ ಮಾಡಿದ್ದಾರೆ. ಈ ಕುರಿತು ಕುಟುಂಬಸ್ಥರು, ವೈದ್ಯರ ವಿರುದ್ಧ ರಾಮನಗರ ಪುರಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿರುವ ವೈದ್ಯ, ನಾನು ಮಗುವಿಗೆ ಯಾವುದೇ ಇಂಜೆಕ್ಷನ್ ನೀಡಿಲ್ಲ. ಮಗು ಯಾವ ಕಾರಣಕ್ಕೆ ಸಾವನ್ನಪ್ಪಿದೆ ಎಬುವುದು ಗೊತ್ತಿಲ್ಲ ಎಂದಿದ್ದಾರೆ.