ಜೆರುಸಲೇಂ: ಇರಾನ್ ಮತ್ತು ಇಸ್ರೇಲ್ ನಡುವೆ ಸಂಘರ್ಷ ತೀವ್ರಗೊಂಡಿದ್ದು, ಎರಡೂ ದೇಶಗಳು ಪರಸ್ಪರ ದಾಳಿ-ಪ್ರತಿದಾಳಿ ನಡೆಸುತ್ತಿವೆ. ಶುಕ್ರವಾರ ರಾತ್ರಿಯಿಂದೀಚೆಗೆ ಆರಂಭವಾದ ಯುದ್ಧ ಸದೃಶ ವಾತಾವರಣವು ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆಯಿದೆ. ಎರಡು ದೇಶಗಳ ನಡುವಿನ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಹಬ್ಬಿಸಿದ್ದು, ಇದು ಮತ್ತಷ್ಟು ದೇಶಗಳಿಗೆ ವಿಸ್ತರಣೆಯಾಗುವ ಸಾಧ್ಯತೆಯೂ ಇಲ್ಲದಿಲ್ಲ.
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಅಥವಾ ಯುದ್ಧದ ಪರಿಣಾಮ ಆ ದೇಶಗಳಿಗಷ್ಟೇ ಸೀಮಿತವಾಗಿರುವುದಿಲ್ಲ. ಅದು ಇಡೀ ಜಗತ್ತಿನ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಪರಿಣಾಮ ಬೀರಲಿದೆ.
ಅದು ಹೇಗೆಂಬ ಮಾಹಿತಿ ಇಲ್ಲಿದೆ:
ವಾಯುಪ್ರದೇಶ ಬಂದ್: ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯಿಂದಾಗಿ ಮಧ್ಯಪ್ರಾಚ್ಯದ ವಾಯುಪ್ರದೇಶದಲ್ಲಿ ಈಗಾಗಲೇ ಗೊಂದಲ ಉಂಟಾಗಿದೆ. ಹಲವು ದೇಶಗಳು ತಮ್ಮ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿವೆ ಅಥವಾ ವಿಮಾನಗಳ ಹಾರಾಟದ ಮಾರ್ಗವನ್ನು ಬದಲಾಯಿಸಿವೆ. ಇರಾನ್ ಆಗಸದಲ್ಲಿ ಒಂದೇ ಒಂದು ವಿಮಾನವೂ ಸಂಚರಿಸುತ್ತಿಲ್ಲ. ವಾಣಿಜ್ಯ ವಿಮಾನಗಳ ಹಾರಾಟ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇದು ಹೀಗಿಯೇ ಮುಂದುವರಿದರೆ ಜಾಗತಿಕ ವಿಮಾನಯಾನ ಉದ್ಯಮಕ್ಕೆ ದೊಡ್ಡ ಪೆಟ್ಟು ಬೀಳಲಿದೆ.
ತೈಲ ಬೆಲೆ ಏರಿಕೆ: ಮಧ್ಯಪ್ರಾಚ್ಯವು ಜಗತ್ತಿನ ಪ್ರಮುಖ ತೈಲ ಉತ್ಪಾದಕ ಕೇಂದ್ರವಾಗಿದ್ದು, ಇರಾನ್-ಇಸ್ರೇಲ್ ಸಂಘರ್ಷದಿಂದ ತೈಲ ಪೂರೈಕೆಯಲ್ಲಿ ಅಡಚಣೆಯಾಗುವ ಭೀತಿ ಎದುರಾಗಿದೆ. ಇದರಿಂದ ಜಾಗತಿಕ ತೈಲ ಬೆಲೆಗಳು ಏರಿಕೆಯಾಗುವ ಸಾಧ್ಯತೆಯಿದೆ. ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಇತರೆ ಇಂಧನಗಳ ದರ ಹೆಚ್ಚಳವಾಗಲಿದೆ. ಇದು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು.
ಸಂಪೂರ್ಣ ಯುದ್ಧದ ಭೀತಿ: ಈ ಸಂಘರ್ಷವು ಒಂದು ವೇಳೆ ತೀವ್ರಗೊಂಡರೆ, ಇದು ಪೂರ್ಣಪ್ರಮಾಣದ ಯುದ್ಧಕ್ಕೆ ಕಾರಣವಾಗಬಹುದು. ಇದರಿಂದ ಇರಾನ್ ಮತ್ತು ಇಸ್ರೇಲ್ನ ಜೊತೆಗೆ ಇತರ ಪ್ರಾದೇಶಿಕ ಶಕ್ತಿಗಳು ಸಹ ಈ ಯುದ್ಧದಲ್ಲಿ ಭಾಗಿಯಾಗಬಹುದು, ಇದು ಮಧ್ಯಪ್ರಾಚ್ಯದಲ್ಲಿ ದೊಡ್ಡ ಮಟ್ಟದ ಅಸ್ಥಿರತೆಗೆ ಕಾರಣವಾಗಬಹುದು.
ಜಾಗತಿಕ ಆರ್ಥಿಕತೆಯ ಮೇಲಿನ ಪರಿಣಾಮ: ತೈಲ ಬೆಲೆ ಏರಿಕೆ, ವಾಣಿಜ್ಯ ಮಾರ್ಗಗಳ ಅಡಚಣೆ ಮತ್ತು ಯುದ್ಧದ ಭೀತಿಯು ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಷೇರು ಮಾರುಕಟ್ಟೆಗಳು ಪತನಗೊಳ್ಳಬಹುದು. ಒಪ್ಪಂದಗಳು ಮತ್ತು ವಾಣಿಜ್ಯ ಒಪ್ಪಂದಗಳಿಗೂ ತೊಂದರೆಗೊಳಗಾಗಬಹುದು.
ಮಾನವೀಯ ಸಂಕಷ್ಟ: ಸಂಘರ್ಷ ತೀವ್ರಗೊಂಡರೆ, ಇದು ದೊಡ್ಡ ಮಟ್ಟದ ಮಾನವೀಯ ಸಂಕಷ್ಟಕ್ಕೆ ಕಾರಣವಾಗಬಹುದು. ಸಾವಿರಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡು, ನಿರ್ವಸಿತರಾಗುತ್ತಾರೆ. ಆಹಾರ ಮತ್ತು ಆರೋಗ್ಯ ಸೇವೆಗಳ ಕೊರತೆ ಉಂಟಾಗುತ್ತದೆ ಮತ್ತು ನಿರಾಶ್ರಿತರ ಸಂಖ್ಯೆ ಹೆಚ್ಚಾಗುತ್ತದೆ. ಇದಕ್ಕೆಲ್ಲ ಸಾಕ್ಷಿಯಾಗಿ ರಷ್ಯಾ-ಉಕ್ರೇನ್ ಯುದ್ಧ, ಇಸ್ರೇಲ್-ಗಾಜಾ ಯುದ್ಧವೇ ನಮ್ಮ ಮುಂದಿವೆ. ಒಟ್ಟಿನಲ್ಲಿ ಈ ಸಂಘರ್ಷವು ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಗಂಭೀರ ಧಕ್ಕೆ ತರಬಹುದು. ದಾದ್ದರಿಂದ, ರಾಜತಾಂತ್ರಿಕ ಪರಿಹಾರಗಳ ಮೂಲಕ ಈ ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಅಗತ್ಯವಾಗಿದೆ.