ರಾಯ್ಪುರ: ದೇಶದ ಅತಿದೊಡ್ಡ ನಕ್ಸಲ್ ನಿಗ್ರಹ ಕಾರ್ಯಾಚರಣೆಯೊಂದರಲ್ಲಿ(Naxal Encounter), ಮೂರು ರಾಜ್ಯಗಳ 20,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಛತ್ತೀಸ್ಗಢದ ಬಿಜಾಪುರದಲ್ಲಿ 1,000ಕ್ಕೂ ಹೆಚ್ಚು ನಕ್ಸಲರನ್ನು ಸುತ್ತುವರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಛತ್ತೀಸ್ಗಢ, ತೆಲಂಗಾಣ ಮತ್ತು ಮಹಾರಾಷ್ಟ್ರದ ಭದ್ರತಾ ಸಿಬ್ಬಂದಿಯು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಈಗಾಗಲೇ ಕನಿಷ್ಠ 5 ನಕ್ಸಲರನ್ನು ಹತ್ಯೆಗೈಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದಲ್ಲಿ ನಕ್ಸಲ್ವಾದದ ನಿರ್ಮೂಲನೆಗೆ 2026ರ ಮಾರ್ಚ್ 31ರ ಗಡುವನ್ನು ನಿಗದಿಪಡಿಸಿರುವಂತೆಯೇ ಈ ಬೃಹತ್ ಕಾರ್ಯಾಚರಣೆ ಆರಂಭವಾಗಿದೆ.
ಮೋಸ್ಟ್ ವಾಂಟೆಡ್ ನಕ್ಸಲ್ ಕಮಾಂಡರ್ ಹಿದ್ಮಾ ಮತ್ತು ಬೆಟಾಲಿಯನ್ ಮುಖ್ಯಸ್ಥ ದೇವಾ ಸೇರಿದಂತೆ ಪ್ರಮುಖ ನಕ್ಸಲ್ ನಾಯಕರ ಉಪಸ್ಥಿತಿಯ ಬಗ್ಗೆ ಗುಪ್ತಚರ ಸಂಸ್ಥೆಗಳಿಂದ ನಿಖರ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಈ ಆಪರೇಷನ್ ಆರಂಭವಾಗಿದೆ. 48 ಗಂಟೆಗಳಿಂದ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಸುಮಾರು 1000ಕ್ಕೂ ಅಧಿಕ ನಕ್ಸಲರನ್ನು 20000ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದಾರೆ ಎನ್ನಲಾಗಿದೆ.
ಜಿಲ್ಲಾ ಮೀಸಲು ಪಡೆ(ಡಿಆರ್ಜಿ), ಬಸ್ತಾರ್ ಫೈಟರ್ಸ್, ವಿಶೇಷ ಕಾರ್ಯಪಡೆ (ಎಸ್ಟಿಎಫ್), ರಾಜ್ಯ ಪೊಲೀಸರ ಎಲ್ಲಾ ಘಟಕಗಳು, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮತ್ತು ಅದರ ಕಮಾಂಡೋ ಬೆಟಾಲಿಯನ್ಸ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಸೇರಿದಂತೆ ವಿವಿಧ ಘಟಕಗಳಿಗೆ ಸೇರಿದ ಭದ್ರತಾ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಛತ್ತೀಸ್ಗಢ-ತೆಲಂಗಾಣ ಗಡಿಯಲ್ಲಿರುವ ಕರ್ರೆಗುಟ್ಟಾ ಬೆಟ್ಟಗಳನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದು, ನಕ್ಸಲರು ತಪ್ಪಿಸಿಕೊಳ್ಳುವ ಎಲ್ಲಾ ಮಾರ್ಗಗಳನ್ನು ಕಡಿತಗೊಳಿಸಲಾಗಿದೆ. ಈ ಕಾರ್ಯಾಚರಣೆಯೇನಾದರೂ ಯಶಸ್ವಿಯಾದರೆ ಇದು ದೇಶದ ಇತಿಹಾಸದಲ್ಲೇ ಅತಿದೊಡ್ಡ ನಕ್ಸಲ್ ನಿಗ್ರಹ ಕಾರ್ಯಾಚರಣೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ ಎಂದೂ ಹೇಳಲಾಗಿದೆ.
ದಟ್ಟವಾದ ಕಾಡುಗಳು ಮತ್ತು ಬೆಟ್ಟಗಳ ಸರಣಿಯಿಂದ ಸುತ್ತುವರೆದಿರುವ ಈ ಪ್ರದೇಶವನ್ನು ಮಾವೋವಾದಿಗಳ ಬೆಟಾಲಿಯನ್ ಸಂಖ್ಯೆ 1 ರ ನೆಲೆ ಎಂದೇ ಪರಿಗಣಿಸಲಾಗಿದೆ. ಕೆಲವು ದಿನಗಳ ಹಿಂದೆ, ನಕ್ಸಲರು ಪತ್ರಿಕಾ ಪ್ರಕಟಣೆ ಹೊರಡಿಸಿ, ಬೆಟ್ಟಗಳಿಗೆ ಪ್ರವೇಶಿಸದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದರು. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಐಇಡಿ(ಸುಧಾರಿತ ಸ್ಫೋಟಕ)ಗಳನ್ನು ಹೂತಿಡಲಾಗಿದೆ ಎಂದೂ ಈ ಎಚ್ಚರಿಕೆಯ ಸಂದೇಶದಲ್ಲಿ ತಿಳಿಸಿದ್ದರು.
ಭಾರತವನ್ನು “ನಕ್ಸಲ್ ಮುಕ್ತ”ವನ್ನಾಗಿ ಮಾಡಲು ಕೇಂದ್ರ ಸರ್ಕಾರ ಪಣತೊಟ್ಟಿರುವಂತೆಯೇ ಈ ಬೆಳವಣಿಗೆ ಬಂದಿದೆ. “ಮಾರ್ಚ್ 31, 2026ರ ಮೊದಲು, ನಾವು ದೇಶದಿಂದ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತೇವೆ. ಅದು ಸಾಧ್ಯವಾದರೆ ನಂತರ ದೇಶದ ಯಾವುದೇ ನಾಗರಿಕರು ಪ್ರಾಣ ಕಳೆದುಕೊಳ್ಳಬೇಕಾಗಿಲ್ಲ” ಎಂದು ಅಮಿತ್ ಶಾ ಫೆಬ್ರವರಿಯಲ್ಲಿ ಘೋಷಿಸಿದ್ದರು.
ಅದರಂತೆ ಈ ವರ್ಷ ಛತ್ತೀಸ್ಗಢದಲ್ಲಿ ನಡೆದ ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಸುಮಾರು 150 ನಕ್ಸಲರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ನಕ್ಸಲರ ತಾಣ ಎಂದು ಕರೆಯಲ್ಪಡುವ ಬಸ್ತಾರ್ ವಿಭಾಗದಲ್ಲಿ 124 ಮಂದಿಯನ್ನು ನಿರ್ಮೂಲನೆ ಮಾಡಲಾಗಿದೆ. ಕಳೆದ ವಾರ ಜಾರ್ಖಂಡ್ನ ಬೊಕಾರೊ ಜಿಲ್ಲೆಯಲ್ಲೂ ಸಿಆರ್ಪಿಎಫ್ ಕೋಬ್ರಾ ಕಮಾಂಡೋಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಉನ್ನತ ನಾಯಕ ಸೇರಿದಂತೆ ಎಂಟು ನಕ್ಸಲರನ್ನು ಹತ್ಯೆಗೈಯ್ಯಲಾಗಿತ್ತು.