ಜಮ್ಮು: ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸೇನೆ, ಪೊಲೀಸರು ಮತ್ತು ಸಿಆರ್ಪಿಎಫ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾದ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಬಂಧಿತರಿಂದ ಎರಡು ಎಕೆ-56 ರೈಫಲ್ ಗಳು, 4 ಮ್ಯಾಗಜಿನ್ಗಳು, ಎರಡು ಹ್ಯಾಂಡ್ ಗ್ರೆನೇಡ್ಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಗ್ರರ ಬಳಿಯಿದ್ದ 5,400 ರೂ. ನಗದು ಮತ್ತು ಆಧಾರ್ ಕಾರ್ಡ್ಗಳನ್ನೂ ವಶಕ್ಕೆ ಪಡೆಯಲಾಗಿದೆ. ಶೋಪಿಯಾನ್ ಜಿಲ್ಲೆಯ ಬಸ್ಕುಚನ್ ಇಮಾಮ್ ಸಾಹಿಬ್ನಲ್ಲಿ ಈ ಕಾರ್ಯಾಚರಣೆಯನ್ನು ಸೇನೆಯ 44 ಆರ್ಆರ್, ಪೊಲೀಸ್ ಮತ್ತು 178 ಸಿಆರ್ಪಿಎಫ್ ಕೈಗೆತ್ತಿಕೊಂಡಿದ್ದವು.
ಈ ಸಂದರ್ಭದಲ್ಲಿ, ಗುಂಡಿನ ಚಕಮಕಿ ನಡೆಯುವ ಸಾಧ್ಯತೆಯನ್ನು ಮನಗಂಡ ಉಗ್ರರಾದ ಇರ್ಫಾನ್ ಬಶೀರ್ ಮತ್ತು ಉಜೈರ್ ಸಲಾಮ್ ತಾವೇ ಶರಣಾದರು ಎಂದು ಪೊಲೀಸರು ತಿಳಿಸಿದ್ದಾರೆ.
“ನಿಖರ ಸುಳಿವಿನ ಮೇರೆಗೆ ಬಸ್ಕುಚಾನ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇದೇ ಸಂದರ್ಭದಲ್ಲಿ ಉಗ್ರರ ಚಲನವಲನ ಗಮನಕ್ಕೆ ಬಂತು. ಭದ್ರತಾ ಪಡೆಗಳು ನಡೆಸಿದ ಕ್ಷಿಪ್ರ ಹಾಗೂ ವ್ಯೂಹಾತ್ಮಕ ಕಾರ್ಯಾಚರಣೆಯ ಫಲವಾಗಿ ಇಬ್ಬರು ಹೈಬ್ರಿಡ್ ಲಷ್ಕರ್ ಉಗ್ರರೂ ಶರಣಾದರು” ಎಂದು ಪೊಲೀಸರು ಹೇಳಿದ್ದಾರೆ.
ಏಪ್ರಿಲ್ 22ರ ಪಹಲ್ಗಾಮ್ ಬೈಸರನ್ ಕಣಿವೆಯ ದಾಳಿಯ ಬಳಿಕ ಭದ್ರತಾ ಪಡೆಗಳು ತಮ್ಮ ಉಗ್ರ ನಿಗ್ರಹ ಕಾರ್ಯಾಚರಣೆಗಳನ್ನು ದಕ್ಷಿಣ ಕಾಶ್ಮೀರದ ಕೆಲವು ನಿರ್ದಿಷ್ಟ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆಸಲಾರಂಭಿಸಿವೆ.
ಇದೇ ತಿಂಗಳ ಆರಂಭದಲ್ಲಿ ಪುಲ್ವಾಮಾದ ತ್ರಾಲ್ ಮತ್ತು ಶೋಪಿಯಾನ್ ಜಿಲ್ಲೆಯ ಕೆಲ್ಲರ್ ಪ್ರದೇಶದಲ್ಲಿ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ 6 ಉಗ್ರಗಾಮಿಗಳನ್ನು ಹತ್ಯೆಗೈಯ್ಯಲಾಗಿತ್ತು. ಎರಡೂ ಕಾರ್ಯಾಚರಣೆಗಳಲ್ಲಿ ತಲಾ ಮೂವರು ಉಗ್ರರನ್ನು ಸಂಹರಿಸಲಾಗಿತ್ತು. ಈ ಪೈಕಿ ಲಷ್ಕರ್-ಎ-ತೊಯ್ಬಾದ ಟಾಪ್ ಕಮಾಂಡರ್ ಶಾಹೀದ್ ಕುಟ್ಟೆ ಕೂಡ ಹತ್ಯೆಯಾಗಿದ್ದ.