ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ತಹಾವೂರ್ ರಾಣಾ(Tahawwur Rana) ಅಮೆರಿಕದಿಂದ ಗಡೀಪಾರಾಗಿ ದೆಹಲಿಗೆ ತಲುಪಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ 14 ವರ್ಷಗಳ ಹಿಂದಿನ ಪೋಸ್ಟ್ ವೈರಲ್ ಆಗಿದೆ.
ತಹಾವೂರ್ ರಾಣಾನನ್ನು “ನಿರಪರಾಧಿ” ಎಂದು ಘೋಷಿಸುವ ಮೂಲಕ ಅಮೆರಿಕವು ಭಾರತದ ಸಾರ್ವಭೌಮತ್ವವನ್ನು ಅವಮಾನಿಸಿದೆ ಎಂದು 2011ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದರು. ಜೊತೆಗೆ ಆ ಪೋಸ್ಟ್ ನಲ್ಲಿ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿದೇಶಾಂಗ ನೀತಿಯನ್ನೂ ಟೀಕಿಸಿದ್ದರು.
2011ರಲ್ಲಿ, ಅಮೆರಿಕದ ನ್ಯಾಯಾಲಯವು 166 ಜನರ ಸಾವಿಗೆ ಕಾರಣವಾದ ಮುಂಬೈ ದಾಳಿಯ ಸಂಚು ರೂಪಿಸುವಲ್ಲಿ ತಹಾವೂರ್ ರಾಣಾ ನೇರವಾಗಿ ಪಾತ್ರ ವಹಿಸಿಲ್ಲ ಎಂದು ಹೇಳಿ ಆತನನ್ನು ದೋಷ ಮುಕ್ತಗೊಳಿಸಿತ್ತು. ಆದರೆ ದಾಳಿಗೆ ಕಾರಣವಾದ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸಿದ್ದಕ್ಕಾಗಿ ಆತನನ್ನು ಶಿಕ್ಷೆಗೆ ಗುರಿಪಡಿಸಲಾಗಿತ್ತು.
ಈ ತೀರ್ಪು ಬಂದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, “ಮುಂಬೈ ದಾಳಿಯಲ್ಲಿ ತಹಾವೂರ್ ರಾಣಾ ನಿರಪರಾಧಿ ಎಂದು ಅಮೆರಿಕ ಘೋಷಿಸುವ ಮೂಲಕ ಭಾರತದ ಸಾರ್ವಭೌಮತ್ವಕ್ಕೆ ಅವಮಾನ ಮಾಡಿದೆ. ಇದು “ವಿದೇಶಾಂಗ ನೀತಿಯ ಅತಿದೊಡ್ಡ ಹಿನ್ನಡೆ” ಎಂದು ಬರೆದಿದ್ದರು.
ಈಗ ರಾಣಾ ಗಡೀಪಾರಾಗುತ್ತಿದ್ದಂತೆಯೇ ಸಾಮಾಜಿಕ ಮಾಧ್ಯಮ ಬಳಕೆದಾರರು ಮೋದಿಯವರ 14 ವರ್ಷ ಹಳೆಯ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ. ಜತೆಗೆ ಭಾರತದಲ್ಲಿ ಕಾನೂನು ಪ್ರಕ್ರಿಯೆಯನ್ನು ಎದುರಿಸಲು ರಾಣಾನನ್ನು ಯಶಸ್ವಿಯಾಗಿ ಭಾರತಕ್ಕೆ ಹಸ್ತಾಂತರಿಸಿಕೊಂಡಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ್ದಾರೆ.
“ಕೊಟ್ಟ ಮಾತಿನಂತೆ ನಡೆಯುವ ನಾಯಕ. ಕ್ಯಾಪ್ಟನ್ ಮೈ ಕ್ಯಾಪ್ಟನ್” ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಬರೆದಿದ್ದಾರೆ. ಮತ್ತೊಬ್ಬರು, “ಕೊನೆಗೂ ನೀವು ಸಾಧಿಸಿಬಿಟ್ಟಿರಿ ಸರ್!! ಅಭಿನಂದನೆಗಳು ಮತ್ತು ಧನ್ಯವಾದಗಳು!” ಎಂದು ಬರೆದುಕೊಂಡಿದ್ದಾರೆ. ಅನೇಕ ಟ್ವೀಟಿಗರು, “ಮೋದಿ ಹೈ ತೋ ಮುಮ್ಕಿನ್ ಹೈ” (ಪ್ರಧಾನಿ ಮೋದಿ ಇದ್ದರೆ, ಎಲ್ಲವೂ ಸಾಧ್ಯ) ಎಂದು ಬರೆದುಕೊಂಡಿದ್ದಾರೆ.
ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್, “ಅವರು ಮರೆಯಲಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿಯವರು, ಉಗ್ರ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಲ್ಲಿ ಮನವಿ ಮಾಡಿದ್ದರು. ಅದರಂತೆಯೇ ಅಮೆರಿಕ ರಾಣಾನನ್ನು ಹಸ್ತಾಂತರಿಸಿದೆ.
ರಾಣಾನನ್ನು ಹೊತ್ತ ವಿಶೇಷ ವಿಮಾನ ನಿನ್ನೆ(ಗುರುವಾರ) ಸಂಜೆ ದೆಹಲಿಗೆ ಬಂದಿಳಿದಿದೆ. ಬಳಿಕ ಆತನನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 18 ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶಕ್ಕೆ ನೀಡಿ ಆದೇಶ ಹೊರಡಿಸಿದೆ.
ಪಾಕಿಸ್ತಾನ ಮೂಲದ ಕೆನಡಾ ಪ್ರಜೆಯಾಗಿರುವ ತಹಾವೂರ್ ರಾಣಾ ಈ ಹಿಂದೆ ಪಾಕಿಸ್ತಾನ ಸೇನೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. 166 ಅಮಾಯಕರ ಸಾವಿಗೆ ಕಾರಣವಾದ 2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಆತ ಮಹತ್ವದ ಪಾತ್ರ ವಹಿಸಿದ್ದ ಎಂದು ಆರೋಪಿಸಲಾಗಿದೆ.