ನವದೆಹಲಿ: ಭಾರತದ ಜಿಡಿಪಿ, ತಲಾದಾಯ ಹೆಚ್ಚಾಗುತ್ತಿದೆ. ಮೂಲಸೌಕರ್ಯಗಳು ಹೆಚ್ಚಾಗುತ್ತಿವೆ. ಜನರ ಜೀವನ ಗುಣಮಟ್ಟ ಸುಧಾರಣೆಯಾಗುತ್ತಿದೆ. ನೂತನ ತಂತ್ರಜ್ಞಾನಕ್ಕೆ ಭಾರತ ತೆರೆದುಕೊಂಡಿದೆ. ಇದರ ಬೆನ್ನಲ್ಲೇ, ಕಳೆದ 10 ವರ್ಷಗಳಲ್ಲಿ ಭಾರತದಾದ್ಯಂತ 17.1 ಕೋಟಿ ಜನ ಕಡುಬಡತನದಿಂದ ಹೊರಬಂದಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ. ಇದರೊಂದಿಗೆ, ಬಡತನದ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಮುನ್ನಡೆ ಸಾಧಿಸಿದಂತಾಗಿದೆ.
ವಿಶ್ವಸಂಸ್ಥೆಯು “ಪಾವರ್ಟಿ ಆ್ಯಂಡ್ ಬ್ರೀಫ್” ಎಂಬ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಭಾರತದಲ್ಲಿ ಬಡತನದ ಕುರಿತು ಉಲ್ಲೇಖಿಸಲಾಗಿದೆ. 2021-22ರಲ್ಲಿ ಭಾರತದಲ್ಲಿ ದಿನಕ್ಕೆ 183 ರೂ. (2.15 ಡಾಲರ್) 183 ರೂಪಾಯಿಗಿಂತ ಕಡಿಮೆ ಆದಾಯದಲ್ಲಿ ಜೀವನ ನಡೆಸುತ್ತಿದ್ದವರ ಪ್ರಮಾಣ ಶೇ.16.2ರಷ್ಟಿತ್ತು. 2022-23ರ ವೇಳೆಗೆ ಅದು ಶೇ.2.3ಕ್ಕೆ ಇಳಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಷ್ಟೇ ಅವಧಿಯಲ್ಲಿ 17.1 ಕೋಟಿ ಜನ ಬಡತನದಿಂದ ಮುಕ್ತರಾಗಿದ್ದಾರೆ ಎಂದು ತಿಳಿಸಲಾಗಿದೆ.
ಗ್ರಾಮೀಣ ಭಾಗದಲ್ಲಿ ಕಡುಬಡತನದ ಪ್ರಮಾಣವು 10 ವರ್ಷಗಳ ಹಿಂದೆ ಶೇ.18.4ರಷ್ಟಿತ್ತು. ಈಗ ಅದು ಶೇ.2.8ಕ್ಕೆ ಇಳಿಕೆಯಾಗಿದೆ. ಇನ್ನು, ನಗರ ಭಾಗದ ಬಡತನದ ಪ್ರಮಾಣವು ಶೇ.7.7ರಿಂದ ಶೇ.1.1ಕ್ಕೆ ಇಳಿಕೆಯಾಗಿದೆ. ನಗರ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆಯು ಕ್ಷಿಪ್ರವಾಗಿ ಆಗಿದೆ ಎಂದು ವಿಶ್ವ ಬ್ಯಾಂಕ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವಬ್ಯಾಂಕ್ ವರದಿಯ ಕುರಿತು ಕೇಂದ್ರ ಸರ್ಕಾರ ಸಂತಸ ವ್ಯಕ್ತಪಡಿಸಿದೆ. “ಕೇಂದ್ರ ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳು, ಆರ್ಥಿಕ ಸುಧಾರಣೆಗಳು, ಮೂಲ ಸೌಕರ್ಯಗಳನ್ನು ಒದಗಿಸುವುದು ಸೇರಿ ಹಲವು ಯೋಜನೆಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಬಡತನ ನಿರ್ಮೂಲನೆಯಾಗಿದೆ. ಕೋಟ್ಯಂತರ ಜನ ಬಡತನದಿಂದ ಮುಕ್ತವಾಗಲು ಯೋಜನೆಗಳೇ ಕಾರಣವಾಗಿವೆ” ಎಂದು ಕೇಂದ್ರ ಸರ್ಕಾರ ತಿಳಿಸಿದೆ.