ನವದೆಹಲಿ: ಕಳೆದ ಒಂದು ವಾರದಲ್ಲಿ ದೇಶಾದ್ಯಂತ ಕೋವಿಡ್-19(Covid-19) ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಭಾರತದಲ್ಲಿ ಈಗ ಒಂದು ವಾರದಲ್ಲಿ ಅವಧಿಯಲ್ಲಿ ಸೋಂಕಿತರ ಸಂಕ್ 752ಕ್ಕೆ ಏರಿಕೆಯಾಗಿದೆ. ಈ ಮೂಲಕ ಒಟ್ಟಾರೆ ಪ್ರಕರಣಗಳು 1000ಕ್ಕೆ ತಲುಪಿದೆ. ಕೇರಳ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.
ಕೇರಳದಲ್ಲಿ 335 ಹೊಸ ಸೋಂಕು ಪ್ರಕರಣ ಪತ್ತೆಯಾಗಿದ್ದು, ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 430ಕ್ಕೇರಿಕೆಯಾಗಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಕ್ರಮವಾಗಿ 153 ಮತ್ತು 99 ಹೊಸ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಸಕ್ರಿಯ ಕೋವಿಡ್ ಸೋಂಕಿತರ ಸಂಖ್ಯೆ ಈಗ 209 ಮತ್ತು 104ಕ್ಕೇರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶ ತಿಳಿಸಿದೆ.
ಇದಲ್ಲದೇ, ಗುಜರಾತ್ನಲ್ಲಿ 83 ಪ್ರಕರಣಗಳು, ಕರ್ನಾಟಕದಲ್ಲಿ 47, ಉತ್ತರಪ್ರದೇಶದಲ್ಲಿ 15 ಮತ್ತು ಪಶ್ಚಿಮ ಬಂಗಾಳದಲ್ಲಿ 12 ಪ್ರಕರಣಗಳು ಪತ್ತೆಯಾಗಿವೆ.
ದೇಶದ ಬಹುತೇಕ ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವಂತೆಯೇ, ಎರಡು ಹೊಸ ಉಪತಳಿಗಳಾದ ಎನ್ಬಿ.1.8.1 ಮತ್ತು ಎಲ್ಎಫ್.7 ಭಾರತದಲ್ಲಿ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರದ ಸಂಸ್ಥೆಯಾದ ಸಾರ್ಸ್ ಕೋವ್-2 ಜೆನೋಮಿಕ್ಸ್ ಕನ್ಸಾರ್ಟಿಯಮ್(ಇನ್ಸಾಕಾಗ್) ದತ್ತಾಂಶಗಳು ತಿಳಿಸಿವೆ.
ಸದ್ಯಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ಎಲ್ಎಫ್.7 ಮತ್ತು ಎನ್ಬಿ.1.8 ಅನ್ನು ನಿಗಾದಲ್ಲಿರುವ ಉಪಳಿ ಎಂದು ಗುರುತಿಸಿದೆ. ಇದನ್ನು ಕಳವಳಕಾರಿ ಅಥವಾ ಆತಂಕಕಾರಿ ಉಪತಳಿ ಎಂದು ವರ್ಗೀಕರಿಸಿಲ್ಲ.
ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು ಶನಿವಾರವಷ್ಟೇ ದೇಶದ ಕೋವಿಡ್ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಪ್ರಕರಣಗಳು ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ವರದಿಯಾಗಿದ್ದು, ಎಲ್ಲವೂ ಸೌಮ್ಯ ಪ್ರಕರಣಗಳಾಗಿವೆ. ಮನೆಯಲ್ಲೇ ಸೋಂಕಿತರು ಗುಣಮುಖರಾಗುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ. ಜೊತೆಗೆ ಸಾರ್ವಜನಿಕರು ಮಾಸ್ಕ್ ಧರಿಸುವುದು, ಆಗಾಗ್ಗೆ ಕೈಗಳನ್ನು ಸ್ವಚ್ಛಗೊಳಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಹೆಚ್ಚು ಜನಸಂದಣಿ ಇರುವ ಪ್ರದೇಶಗಳಿಗೆ ಪ್ರಯಾಣ ಬೆಳೆಸದೇ ಇರುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆಯೂ ಸೂಚಿಸಿದ್ದಾರೆ.