1984ರ ಎಲೆಕ್ಷನ್ ಸಮಯ. ಆಗಷ್ಟೇ ಇಂದಿರಾಗಾಂಧಿಯವರ ಹತ್ಯೆಯಾಗಿತ್ತು. ದೇಶಾದ್ಯಂತ ಕಾಂಗ್ರೆಸ್ಸಿನ ಮೇಲೊಂದು ಅನುಕಂಪದ ಸುನಾಮಿ ಎದ್ದಿತ್ತು.
ಆದರೂ, ತಾವು ಗೆದ್ದೇ ಗೆಲ್ಲುತ್ತೇವೆಂಬ ಅಚಲ ವಿಶ್ವಾಸದಲ್ಲಿದ್ದರು, ಭಾರತೀಯ ಜನತಾ ಪಕ್ಷದ ಅಜಾತಶತ್ರು, ಅಟಲ್ ಬಿಹಾರಿ ವಾಜಪೇಯಿ. ಯಾಕೆಂದರೆ, ಅವರು ಸ್ಪರ್ಧೆ ಮಾಡಲು ಹೊರಟಿದ್ದು ‘ಗ್ವಾಲಿಯರ್’ನಿಂದ. ಅಲ್ಲಿನ ಮಾಜಿ ಮಹಾರಾಣಿ ವಿಜಯರಾಜೇ ಸಿಂಧಿಯಾ ಅವರು ಅದಾಗಲೇ ವಾಜಪೇಯಿಯವರಿಗೆ ತಮ್ಮ ಬೆಂಬಲ ಸೂಚಿಸಿಬಿಟ್ಟಿದ್ದರು. ಅಂದಮೇಲೆ ಇವರ ಗೆಲುವು ತಡೆಯುವವರಾರು? ಅದೇ ಲೆಕ್ಕಾಚಾರದಲ್ಲಿ ಅಂದು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ನಾಮಪತ್ರ ಸಲ್ಲಿಸಿ ನಿರಾಳರಾಗಿದ್ದರು, ವಾಜಪೇಯಿ.
ಆದರೆ ಅವರಿಗೆ ಆಘಾತವೊದಗಿದ್ದು, ನಾಮಪತ್ರ ಸಲ್ಲಿಕೆಯ ಕೊನೆಯ ದಿನ. ಹಾಗೆಯೇ ಬಿಟ್ಟರೆ ಬಲಿಷ್ಠವಾಗಿ ಬೆಳೆದು ನಿಂತು ಕಾಂಗ್ರೆಸ್ಸಿಗೆ ಕಗ್ಗಂಟಾಗುವ ಸೂಚನೆ ಅರಿತಿದ್ದ ಕಾಂಗ್ರೇಸ್ಸಿಗರು, ಕೊನೆ ಕ್ಷಣದ ಟ್ವಿಸ್ಟ್ ಕೊಟ್ಟರು. ಗೆದ್ದೇ ಬಿಟ್ಟೆ ಎಂಬ ಉಮೇಧಿಯಲ್ಲಿ ನಿರಾಳರಾಗಿದ್ದ ವಾಜಪೇಯಿಗೆ ಎದುರಾಗಿ, ಗ್ವಾಲೀಯರ್ ಅಲ್ಲಿ ಇವರ ಗೆಲುವಿಗೆ ಸೋಪಾನದಂತಿದ್ದ ಖುದ್ದು ಮಹಾರಾಣಿಯ ಪುತ್ರನನ್ನೇ ದಾಳವಾಗಿಸಿಕೊಂಡು ರಣ ಕಹಳೆ ಊದಿದರು. ಹೌದು, ರಾಜಪುತ್ರ ‘ಮಾಧವರಾವ್ ಸಿಂಧಿಯಾ’ ಅವರನ್ನು ಕರೆತಂದು ಚುನಾವಣಾ ಕಣದಲ್ಲಿ ನಿಲ್ಲಿಸಿಬಿಟ್ಟರು!. ರಾಜೀವ್ ಗಾಂಧಿಯವರ ಕೊನೆ ಘಳಿಗೆಯ ಈ ರಾಜಕೀಯ ಷಡ್ಯಂತ್ರಕ್ಕೆ, ಹೌಹಾರಿ ಹೋದರು, ವಾಜಪೇಯಿ!. ಅಂದಿಗೆ ತಮ್ಮ ಜಂಘಾಬಲವೇ ಕುಸಿದಂತಾಗಿತ್ತು ಅವರಿಗೆ. ತಕ್ಷಣವೇ ಪಕ್ಕದ ಭೀಂಡ್ ಕ್ಷೇತ್ರದಿಂದ ಇನ್ನೊಂದು ನಾಮಪತ್ರ ಸಲ್ಲಿಸಲು ದೌಡಾಯಿಸಿದರೂ, ಅಲ್ಲಿಗೆ ತಲುಪುವ ಹೊತ್ತಿಗೆ ನಾಮಪತ್ರ ಸಲ್ಲಿಕೆಯ ಸಮಯ ಮೀರಿತ್ತು. ಅಂದು ಕಾಂಗ್ರೆಸ್ಸಿನವರು ಕೊಟ್ಟ ಈ ‘ಮಾಸ್ಟರ್ ಸ್ಟ್ರೋಕ್’ ಪರಿಣಾಮವಾಗಿ ಗ್ವಾಲಿಯರ್ ನಲ್ಲಿ ವಾಜಪೇಯಿ ಒಂದು ಲಕ್ಷದ ಎಪ್ಪತೈದು ಸಾವಿರ ಮತಗಳಿಂದ ಸೋತರು. ಮಾಧವರಾವ್ ಸಿಂಧಿಯಾ 307735 ಮತ ಪಡೆದರೆ, ವಾಜಪೇಯಿ 132141 ಮತ ಗಳಿಸಿದ್ದರು. ಇಂಡಿಯಾದಲ್ಲಿ ಬಿಜೆಪಿಯ ಇಬ್ಬರು ಮಾತ್ರವೇ ಗೆದ್ದಿದ್ದರು. ಆಂಧ್ರ ಪ್ರದೇಶದ ಚಂದು ಪಟ್ಲಾ ರೆಡ್ಡಿ ಹಾಗೂ ಗುಜರಾತಿನ ಎ.ಕೆ. ಪಾಟೀಲ್ ಬಿಜೆಪಿ ಚಿಹ್ನೆಯಡಿ ಗೆಲುವಿನ ನಗೆ ಬೀರಿದ್ದರು. ಏನೇ ಆಗಿದ್ದರು ವಾಜಪೇಯಿ ಸಮಾಧಾನ ಚಿತ್ತದಿಂದಲೇ ಎದುರಿಸಲು ಅಣಿಯಾಗಿದ್ದರು. ಒಂದೆಡೆ ಇಂದಿರಾ ಗಾಂಧಿಯವರ ದುರಂತ ಸಾವಿನ ಸಿಂಪತಿ, ಇನ್ನೊಂದೆಡೆ ರಾಜಪುತ್ನ ಸವಾಲಾದಾಗಲೇ ಖುದ್ದು ವಾಜಪೇಯಿಗೆ ಸೋಲಿನ ಸ್ಮೆಲ್ಲು ಹೊಡೆತ್ತಿತ್ತು. ಹಾಗಾಗಿ ಇಲ್ಲಿ ಹೆಚ್ಚಾಗಿ ಅವರನ್ನು ಚುಚ್ಚಿದ್ದು ಆ ಸೋಲಲ್ಲ; ಬದಲಿಗೆ, ಅದಾದ ನಂತರ ರಾಜೀವ್ ಗಾಂಧಿ ಆಡಿದ ಕುಹಕದ ಮಾತುಗಳು!. ಅಂದು ‘ನಾವಿಬ್ಬರು ನಮಗಿಬ್ಬರು’ ಅಂತ ಅಣಕಿಸಿದ್ದರು, ರಾಜೀವ್. ಆ ಸೋಲಿಗೆ ಎದೆಗುಂದದ ವಾಜಪೇಯಿ ರಾಜೀವ್ ಗಾಂಧಿಯ ಕುಹಕವನ್ನೂ ಸವಾಲಾಗೇ ಸ್ವೀಕರಿಸಿದರು. “ಸೋಲೊಪ್ಪುವುದಿಲ್ಲ, ತಲೆ ತಗ್ಗಿಸುವುದಿಲ್ಲ, ಕಾಲನ ಹಣೆಬರಹ ಅಳಿಸಿ ಬರೆಯುತ್ತೇನೆ
ಹೊಸ ಹಾಡು ಹಾಡುತ್ತೇನೆ” ಎನ್ನುವ ಘೋಷಣೆಯ ಸಾಲುಗಳನ್ನ ಬರೆದಿದ್ದು ಆಗಲೇ. ಹಾಗೆಯೇ ಮಂದುವರೆದು ಮಾತಾಡೀ, ‘ನಮ್ಮನ್ನು ನೋಡಿ ನಗುತ್ತಿದ್ದೀರಲ್ಲಾ ನಗಿ; ಜನ ನಿಮ್ಮ ಸ್ಥಿತಿ ಕಂಡು ನಗುವ ದಿನ ಬಂದೇ ಬರುತ್ತದೆ’ ಅಂತ ಅವರು ಅಂದೇ ಕಾಂಗ್ರೆಸ್ಸಿಗೆ ಎಚ್ಚರಿಕೆ ಕೊಟ್ಟಿದ್ದರು.
ಮುಂದೆ ತೊಂಬತ್ತೊಂದರ ಚುನಾವಣೆಯಲ್ಲಿ ‘ಲಕ್ನೊ’ ಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸಿ ಕಾಂಗ್ರೆಸ್ಸಿನ ಬಾಯಿ ಮುಚ್ಚಿಸಿದ್ದರು. ಮುಂದೆ ದೇಶದ ಪ್ರಧಾನಿಯೂ ಆಗಿ ರಾಜಕೀಯದ ಉನ್ನತಿಯ ಶಿಖರಕ್ಕೆ ಏರಿದರು. ಆದರೆ ಎಂದಿಗೂ ದ್ವೇಷ ರಾಜಕಾರಣ ಮಾಡಲಿಲ್ಲ. ಬದಲಿಗೆ ಅಜಾತ ಶತ್ರುವಾಗಿ ರಾಜಕಾರಣ ಮಾಡಿದರು. ಇಂದಿಗೂ ದೇಶ ಈ ರಾಜಕೀಯ ಸೇನಾನಿಯನ್ನು ಮರೆಯದೆ ನೆನೆಯುತ್ತೆ; ಕಾರಣ ಅವರ ಸ್ನೇಹಮಯ ಶುದ್ಧ ಬದುಕು. ಅಸಲಿಗೆ, ಇಂದಿಗೂ ಅಟಲ್ ಬಿಹಾರಿ ವಾಜಪೇಯಿ ಎಂದರೆ, ಪ್ರತಿಪಕ್ಷಗಳೂ ಜೈ ಎನ್ನುವ ಮಟ್ಟಕ್ಕೆ ಅವರ ವ್ಯಕ್ತಿತ್ವ ಬೆಳೆದು ನಿಂತಿದೆ. ನಿಜಕ್ಕೂ ಅವರು ರಾಜಕಾರಣದಲ್ಲಿ ಈ ದೇಶ ಕಂಡ ಅಗ್ರಗಣ್ಯ ಅಜಾತ ಶತ್ರು.
