ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ‘ವೈಜನಾಥ ಬಿರಾದಾರ್’ ಅಭಿನಯದ “ನೈಂಟಿ ಬಿಡಿ ಮನೀಗ್ ನಡಿ” ಚಿತ್ರ ರೀ ರಿಲೀಸ್ ಆಗುತ್ತಿದೆ. ಹೌದು, ಇಂದಿನಿಂದ “ಜಮಖಂಡಿಯ ಶ್ರೀನಿವಾಸ ಚಿತ್ರಮಂದಿರ”ದಲ್ಲಿ ಚಿತ್ರ ಮರು ಬಿಡುಗಡೆ ಕಾಣುತ್ತಿದ್ದು ಚಿತ್ರಮಂದಿರ ಜಗಮಗಿಸುತ್ತಿದೆ.
ಅಸಲಿಗೆ, “ಅಮ್ಮಾ ಟಾಕೀಸ್ ಬಾಗಲಕೋಟೆ” ಲಾಂಚನದಡಿ ರತ್ನಮಾಲಾ ಬಾದರದಿನ್ನಿ ನಿರ್ಮಿಸಿರುವ ” ನೈಂಟಿ ಬಿಡಿ ಮನೀಗ್ ನಡಿ” ಚಿತ್ರವನ್ನು ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶಿಸಿದ್ದಾರೆ. ಚಿತ್ರವು ಈಗಾಗಲೇ ಬಿಡುಗಡೆಯಾಗಿ ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆಯೊಂದಿಗೆ, ಸತತ ಏಳು ವಾರಗಳ ಕಾಲ ರಾಜ್ಯಾಧ್ಯಂತ ಪ್ರದರ್ಶನ ಕಂಡು ಭರ್ಜರಿ ಐವತ್ತು ದಿನಗಳ ಸಂಭ್ರಮಾಚರಣೆ ಮಾಡಿಕೊಂಡಿತ್ತು.
ಶಿವು ಭೇರಗಿ ಸಾಹಿತ್ಯ-ಸಂಗೀತದ “ಸಿಂಗಲ್ ಕಣ್ಣಾ ಹಾರಸ್ತಿ ಡಬ್ಬಲ್ ಹಾರನ್ ಬಾರಸ್ತಿ” ಎಂಬ ಜವಾರಿ ಹಾಡೊಂದರಲ್ಲಿ ಎಪ್ಪತ್ತು ವರ್ಷದ ಬಿರಾದಾರ್ ಹದಿಹರೆಯದ ಹುಡುಗರನ್ನೂ ನಾಚಿಸುವಂತೆ ಸೊಂಟ ಕುಣಿಸಿದ ಪರಿಗೆ, ನಿಜಕ್ಕೂ ಪ್ರೇಕ್ಷಕ ಪ್ರಭುಗಳು ಶಹಬ್ಬಾಷ್ ಎಂದಿದ್ದರು. ಇನ್ನು ಚಿತ್ರದಲ್ಲಿ ಮೂರು ಹಾಡು, ಮೂರು ಖದರ್ ಫೈಟುಗಳು ತುಂಬಿಕೊಂಡಿದ್ದು, ಚಿತ್ರವು
ಮನರಂಜಿಸುತ್ತಲೇ ಸಮಾಜಕ್ಕೊಂದು ಗಟ್ಟಿ ಸಂದೇಶ ಸಾರಿದ್ದು, ಸಿನಿಪ್ರಿಯರ ಜೊತೆ ಮಾಧ್ಯಮ ವಲಯದಲ್ಲೂ ಉತ್ತಮ ವಿಮರ್ಶೆ ಪಡೆದುಕೊಂಡಿತ್ತು. ಉತ್ತರ ಕರ್ನಾಟಕ ಮೂಲದ ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೀರ ಸಮರ್ಥ್ ಹಿನ್ನೆಲೆ ಸಂಗೀತ, ಕಿರಣ್ ಶಂಕರ್ ಸಂಗೀತ, ಕುಲಭೂಷಣ್ ಕೊರಿಯೋಗ್ರಫಿ, ರಾಕಿ ರಮೇಶ್ ಸಾಹಸ, ಯುಡಿವಿ ವೆಂಕಟೇಶ್ ಸಂಕಲನದಲ್ಲಿ ಚಿತ್ರ ಹದ ಹೆಚ್ಚಿಸಿಕೊಂಡಿದೆ. ಇನ್ನು ನಾಯಕ ಬಿರಾದಾರ್ ಜೊತೆ ರಂಗ ಪ್ರತಿಭೆಗಳಾದ ನೀತಾ ಮೈಂದರ್ಗಿ, ಆರ್ ಡಿ ಬಾಬು, ವಿವೇಕ್ ಜಂಬಗಿ, ಮುರಳಿ ಹೊಸಕೋಟೆ, ರಿಷಬ್ ಬಾದರದಿನ್ನಿ, ಅಭಯ್ ವೀರ್, ರವಿ ದಳವಾಯಿ, ಪ್ರೀತು ಪೂಜಾ, ಹಿರಿಯ ನಟರಾದ ಕರಿಸುಬ್ಬು, ಧರ್ಮ ಚಿತ್ರದಲ್ಲಿನ ತಮ್ಮ-ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ ಪರಿಣಾಮವಾಗಿ, ಚಿತ್ರ ಅಚ್ಚುಕಟ್ಟಾಗಿ ಮೂಡಿ ಬಂದು ಜನಮನ ರಂಜಿಸಿತ್ತು. ಅಸಲಿಗೆ ಇದು ಉತ್ತರ ಕರ್ನಾಟಕದ ಪಕ್ಕಾ ಜವಾರಿ ಸೊಗಡಿನ ಚಿತ್ರವಾದ್ದರಿಂದ, ಆ ಭಾಗದಲ್ಲಿ ತುಸು ಹೆಚ್ಚೇ ಸದ್ದು ಮಾಡಿಕೊಂಡಿತ್ತು. ಇದೀಗ ಮತ್ತೆ ಪುನ: ಚಿತ್ರ ತೆರೆ ಏರಲು ಸಜ್ಜಾಗಿದೆ. ಒಟ್ಟಿನಲ್ಲಿ ಈ ಶುಕ್ರವಾರ ಹೇಳಿಕೊಳ್ಳುವ ಹೊಸ ಸಿನಿಮಾಗಳ ಕೊರತೆಯ ನಡುವೆ, “ಜಮಖಂಡಿ ಶ್ರೀನಿವಾಸ ಚಿತ್ರಮಂದಿರ”ದವರು ಮರಳಿ “ನೈಂಟಿ”ಯತ್ತ ಹೊರಳಿಕೊಂಡಿದ್ದಾರೆ. ಲೆಕ್ಕಾಚಾರದ ಪ್ರಕಾರ ಹೆಸರು ಕೇಳಿರದ ಹೊಸ ಸಿನಿಮಾ ಹೊತ್ತು ತಂದು ಪೆಟ್ಟು ತಿನ್ನುವ ಬದಲು, ಹೆಸರು ಮಾಡಿದ “ನೈಂಟಿ”ಯೇ ಲೇಸು ಎಂಬುದು ಚಿತ್ರಮಂದಿರದವರ ಲೆಕ್ಕಾಚಾರ. ಅಸಲಿಗೆ ಅದೇ ಸತ್ಯ ಕೂಡ!.
