ಬೆಂಗಳೂರು: ನಾನು ಯಾವುದೇ ಕಾರಣಕ್ಕೂ ಮಂಡ್ಯ ಬಿಡುವುದಿಲ್ಲ ಎಂದು ಸಂಸದೆ ಸುಮಲತಾ ಭಾವುಕರಾಗಿದ್ದಾರೆ.
ಇಲ್ಲಿಯ ಜೆಪಿ. ನಗರದಲ್ಲಿರುವ ಅಂಬಿ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿ ಮಾತನಾಡಿದ ಅವರು, ಮಂಡ್ಯದ ಜನತೆ ನನ್ನ ಶಕ್ತಿ, ಆವತ್ತಿಗೂ ನನ್ನ ಪರ ಇದ್ದರು. ಇಂದಿಗೂ ನನ್ನ ಪರ ಇದ್ದಾರೆ. ಇದ್ದರೂ-ಬಿದ್ದರೂ, ಗೆದ್ದರೂ-ಸೋತರೂ ಮಂಡ್ಯ ಬಿಡಲ್ಲ. ಮಂಡ್ಯದಲ್ಲೇ ನನ್ನ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ಭಾವುಕವಾಗಿಯೇ ಹೇಳಿದ್ದಾರೆ.
ಇಂದು ಅವರು ನಡೆಸಿದ ಸಭೆಯಲ್ಲಿ ಸುಮಾರು 500ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸ್ಪರ್ಧೆ ಮಾಡುವಂತೆ ಬೆಂಬಲಿಗರು ಒತ್ತಾಯಿಸಿದರು. ಆನಂತರ ಸಂಸದೆ ಮಾತನಾಡಿದರು. ಈ ಐದು ವರ್ಷ ರಾಜಕೀಯ ಜೀವನ ಪ್ರಾರಂಭವಾಗಿದ್ದೇ ನಿಮ್ಮ ಪ್ರೀತಿಯಿಂದ. ಇವತ್ತೂ ಅದೇ ಪ್ರೀತಿಯಿಂದ ಇಲ್ಲಿ ಸೇರಿದ್ದೀರಿ. ಅಂಬರೀಷ್ ಅವರ ರಾಜಕೀಯ ಜೀವನದ ಆರಂಭವಾದ ಮೊದಲ ದಿನದಿಂದ ಇಲ್ಲಿಯವರೆಗೆ ನನ್ನನ್ನು ಬೆಂಬಲಿಸಿರುವ ನಾಯಕರು ಇಲ್ಲಿದ್ದಾರೆ. ನಮ್ಮ ನೋವನ್ನೂ ಹಂಚಿಕೊಂಡಿದ್ದಾರೆ. ನನಗೆ ರಾಜಕೀಯ ಅನುಭವ ಇಲ್ಲದ ಸಂದರ್ಭದಲ್ಲೂ ಎಲ್ಲರೂ ಜೊತೆಗಿದ್ದರು. ಮಂಡ್ಯದ ಜನರೇ ನನ್ನ ಶಕ್ತಿ, ಆವತ್ತು ಯಾವ ದೊಡ್ಡ ರಾಜಕಾರಣಿಗಳೂ ನನ್ನ ಪರ ಇರಲಿಲ್ಲ. ಇಂದಿಗೂ ಜನರೇ ನನ್ನ ಪರ ಇದ್ದಾರೆ ಎಂದು ಹೇಳಿದ್ದಾರೆ.
ನನಗೆ ಯಾವುದೇ ಸ್ವಾರ್ಥವಿಲ್ಲ. ಮಂಡ್ಯ ಬಿಟ್ಟು ಬೇರೇನೂ ಬೇಡ. ಇವತ್ತು ರಾಜಕೀಯ ಸ್ಥಿತಿ ಬದಲಾಗಿದೆ. ಮಂಡ್ಯದಲ್ಲಿ ಯಾವುದೂ ಸುಲಭವಾಗಿಲ್ಲ. ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಸವಾಲು ಇದೆ. ನಿಮ್ಮನ್ನು ನೋಯಿಸುವ ಯಾವುದೇ ನಿರ್ಧಾರ ನಾನು ತಗೊಳ್ಳುವುದಿಲ್ಲ. ಮಂಡ್ಯದ ಋಣ, ಗುಣ ಎಂದಿಗೂ ಬಿಡುವುದಿಲ್ಲ. ಏಪ್ರಿಲ್. 3ರಂದು ಮತ್ತೆ ಸಭೆ ನಡೆಸಿ, ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ.